ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನ್ ವಶದಲ್ಲಿರುವ ಹಡಗಿನ ಸಿಬ್ಬಂದಿ ಭೇಟಿಗೆ ಭಾರತದ ಅಧಿಕಾರಿಗಳಿಗೆ ಅವಕಾಶ

Published 15 ಏಪ್ರಿಲ್ 2024, 6:48 IST
Last Updated 15 ಏಪ್ರಿಲ್ 2024, 6:48 IST
ಅಕ್ಷರ ಗಾತ್ರ

ನವದೆಹಲಿ: ತನ್ನ ವಶದಲ್ಲಿರುವ ಸರಕು ಸಾಗಣೆ ಹಡಗಿನ 17 ಭಾರತೀಯ ಸಿಬ್ಬಂದಿಯನ್ನು ಭೇಟಿ ಮಾಡಲು ಭಾರತ ಸರ್ಕಾರದ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮೀರ್ ಅಬ್ದುಲ್ಲಾಹಿಯಾನ್ ಹೇಳಿದ್ದಾರೆ.

ಭಾನುವಾರ ನಡೆದ ದೂರವಾಣಿ ಸಂಭಾಷಣೆಯ ವೇಳೆ ಅಮೀರ್ ಅಬ್ದುಲ್ಲಾಹಿಯಾನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಈ ವಿಷಯ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸಂಭಾಷಣೆ ವೇಳೆ ಪೋರ್ಚುಗೀಸ್ ಧ್ವಜ ಹೊಂದಿರುವ ‘ಎಂಎನ್‌ಸಿ ಏರೀಸ್‌’ ಹಡಗಿನಲ್ಲಿರುವ 17 ಭಾರತೀಯ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಜೈಶಂಕರ್ ಅವರು ಕಳವಳ ವ್ಯಕ್ತಪಡಿಸಿದ್ದರು. ಸಿಬ್ಬಂದಿಯನ್ನು ಬಿಡುಗಡೆಗೊಳಿಸುವಂತೆ ಇರಾನ್‌ಗೆ ಮನವಿ ಮಾಡಿದ್ದರು ಎಂದು ವರದಿ ತಿಳಿಸಿದೆ.

‘ನಮ್ಮ(ಇರಾನ್‌) ವಶದಲ್ಲಿರುವ ಹಡಗಿನ ವಿವರಗಳನ್ನು ಕಲೆ ಹಾಕುತ್ತಿದ್ದೇವೆ. ಶೀಘ್ರದಲ್ಲೇ ಭಾರತ ಸರ್ಕಾರದ ಪ್ರತಿನಿಧಿಗಳು ಅವರು ಹೇಳಿದ ಹಡಗಿನ ಸಿಬ್ಬಂದಿಯನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ’ ಎಂದು ಅಮೀರ್‌ ತಿಳಿಸಿದ್ದಾರೆ.

ಏ‍ಪ್ರಿಲ್ 13ರಂದು ಇರಾನ್‌ನ ‘ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್‌’ನ ಕಮಾಂಡರೊಗಳು ಹೋರ್ಮುಜ್ ಜಲಸಂಧಿಯಲ್ಲಿ ‘ಎಂಎನ್‌ಸಿ ಏರೀಸ್‌’ ಹಡಗಿನ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. ಹಡಗಿನಲ್ಲಿರುವ 25 ಸಿಬ್ಬಂದಿಯ ಯೋಗಕ್ಷೇಮ ಮತ್ತು ಹಡಗನ್ನು ಮರಳಿ ಪಡೆಯುವ ಕುರಿತಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಎಂಎನ್‌ಸಿ(ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ) ಶನಿವಾರ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT