ಜೋಹಾನ್ಸ್ಬರ್ಗ್: ಚುನಾವಣಾ ಪ್ರಚಾರಕ್ಕೆ ₹25.12 ಲಕ್ಷ (5 ಲಕ್ಷ ರ್ಯಾಂಡ್) ದೇಣಿಗೆ ನೀಡಿದ ಸಂಸ್ಥೆ ಜೊತೆಗೆ ಮಗ ನಿಕಟ ಸಂಪರ್ಕ ಹೊಂದಿರುವುದನ್ನು ಒಪ್ಪಿಕೊಂಡಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಈ ಮೊತ್ತವನ್ನು ಹಿಂತಿರುಗಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ಭ್ರಷ್ಟಾಚಾರ ಪ್ರಕರಣಗಳಿಗೆ ಸಿಲುಕಿದ ಕಾರಣ ಹಿಂದಿನ ಅಧ್ಯಕ್ಷ ಜಾಕೋಬ್ ಜುಮಾ ಅವರನ್ನು ಅಧ್ಯಕ್ಷ ಹುದ್ದೆಯಿಂದ ಕಿತ್ತೊಗೆಯಲಾಗಿತ್ತು. ಇದೀಗ ಸಿರಿಲ್ ವಿರುದ್ಧವೂ ಸ್ವಹಿತಾಶಕ್ತಿಯ ಆರೋಪ ಕೇಳಿಬಂದಿದೆ.
‘ಮಗ ಆಂಡೈಲ್ ಕೆಲಸ ಮಾಡುತ್ತಿದ್ದ ‘ಬೊಸಾಸಾ’ ಕಂಪನಿಯು ಸರ್ಕಾರದ ಸಂಸ್ಥೆಗಳಿಂದ ಹಲವು ಒಪ್ಪಂದಗಳನ್ನು ಮಾಡಿಕೊಂಡಿತ್ತು. ಇದೇ ಸಂಸ್ಥೆಯು 2017ರಲ್ಲಿ ಪಕ್ಷದ ಚುನಾವಣಾ ಪ್ರಚಾರಕ್ಕೆ ದೇಣಿಗೆ ನೀಡಿತ್ತು’ ಎಂದು ರಾಮಫೋಸಾ ಅವರು ಸಂಸತ್ತಿನಲ್ಲಿ ಬಹಿರಂಗಪಡಿಸಿದ್ದರು.
‘ರಾಮಫೋಸಾ ಗಮನಕ್ಕೆ ಬಾರದೇ, ದೇಣಿಗೆ ಸ್ವೀಕರಿಸಲಾಗಿತ್ತು’ ಎಂದು ಪಕ್ಷದ ನಾಯಕ ಝಿಜಿ ತಿಳಿಸಿದ್ದಾರೆ.
‘ಈ ವಿಷಯ ಬೆಳಕಿಗೆ ಬಂದ ಬಳಿಕ ಸ್ವಯಂಪ್ರೇರಿತರಾಗಿ ಹಣವನ್ನು ಹಿಂದಕ್ಕೆ ನೀಡಲು ಮುಂದಾಗಿದ್ದು, ಪ್ರಚಾರಕ್ಕೆ ಪಡೆಯಲಾದ ದೇಣಿಗೆ ಕುರಿತಂತೆ ತನಿಖೆಗೆ ಆದೇಶಿಸಿದ್ದಾರೆ’ ಎಂದರು.