ಬೀಜಿಂಗ್: ‘ಭಯೋತ್ಪಾದನೆ ವಿರುದ್ಧ ಭಾರತ ಮತ್ತು ಪಾಕಿಸ್ತಾನ ಒಗ್ಗಟ್ಟಿನ ಹೋರಾಟ ನಡೆಸಬೇಕು. ಉಭಯ ದೇಶಗಳು ಇಂತಹ ಬದ್ಧತೆ ಪ್ರದರ್ಶಿಸದಿದ್ದರೆ ಶಾಂಘೈ ಸಹಕಾರ ಸಂಘಟನೆಯಲ್ಲಿ (ಎಸ್ಸಿಒ) ಪಾಲ್ಗೊಳಲು ಅವುಗಳಿಗೆ ಸಾಧ್ಯವಾಗದು’ ಎಂದು ಎಸ್ಸಿಒ ನೂತನ ಪ್ರಧಾನ ಕಾರ್ಯದರ್ಶಿ ವ್ಲಾದಿಮಿರ್ ನೊರೊವ್ ಹೇಳಿದ್ದಾರೆ.
ಅಧಿಕಾರ ಸ್ವೀಕರಿಸಿದ ನಂತರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ನೆಲೆಸುವುದನ್ನು ಸಹಿಸದ ಶಕ್ತಿಗಳೇ ಪುಲ್ವಾಮಾದಲ್ಲಿ ಭಯೋತ್ಪದನಾ ಕೃತ್ಯ ನಡೆಸಿವೆ’ ಎಂದು ಹೇಳಿದರು.
‘ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್–ಎ–ಮೊಹಮ್ಮದ್ನಿಂದ ಆತ್ಮಾಹುತಿ ದಾಳಿ ನಡೆದು, ಸಿಆರ್ಪಿಎಫ್ನ 40 ಜನ ಯೋಧರು ಹತ್ಯೆಯಾದ ನಂತರವೇ ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು’ ಎಂದೂ ನೊರೊವ್ ಹೇಳಿದರು.
‘ಎಸ್ಸಿಒ ಸದಸ್ಯತ್ವ ಪಡೆಯಲು ಮುಂದಾಗುವ ದೇಶಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆ, ಸಂಧಾನದಂತಹ ಸೂತ್ರಗಳ ಮೂಲಕ ನಿವಾರಿಸಿಕೊಳ್ಳಬೇಕು. ಭಯೋತ್ಪಾದನೆ, ಪ್ರತ್ಯೇಕತಾವಾದದ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಬದ್ಧತೆ ಪ್ರದರ್ಶಿಸಬೇಕು ಎಂಬ ನಿಬಂಧನೆ ಇದೆ’ ಎಂದರು.
ಶಾಂಘೈ ಸಹಕಾರ ಸಂಘಟನೆಯನ್ನು 2001ರಲ್ಲಿ ರಚಿಸಲಾಗಿದೆ. ಚೀನಾ, ರಷ್ಯಾ, ಕಜಕ್ಸ್ತಾನ, ಕಿರ್ಗಿಸ್ತಾನ, ತಜಕಿ
ಸ್ತಾನ ಮತ್ತು ಉಜ್ಬೇಕಿಸ್ತಾನ ಸಂಘಟನೆಯ ಸ್ಥಾಪಕ ಸದಸ್ಯ ರಾಷ್ಟ್ರಗಳು. 2017ರಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಸಂಘಟನೆಗೆ ಸೇರ್ಪಡೆ ಮಾಡಲಾಯಿತು.
**
ಭಾರತ–ಪಾಕ್ಗೆ ಎಸ್ಸಿಒ ಪ್ರಧಾನ ಕಾರ್ಯದರ್ಶಿ ಸಲಹೆ
ವಾಷಿಂಗ್ಟನ್: ‘ಭಯೋತ್ಪಾದನಾ ಸಂಘಟನೆಗಳಿಗೆ ಆಶ್ರಯ ನೀಡದೇ ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕಾದ ಜವಾಬ್ದಾರಿ ಚೀನಾದ ಮೇಲಿದೆ’ ಎಂದು ಟ್ರಂಪ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಪ್ರತಿಪಾದಿಸಿದ್ದಾರೆ.
‘ಜೈಷ್–ಎ–ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂಬುದಾಗಿ ಘೋಷಿಸಬೇಕು ಎಂಬ ವಿಶ್ವಸಂಸ್ಥೆಯ ಯತ್ನಕ್ಕೆ ಚೀನಾ ಅಡ್ಡಿಪಡಿಸುತ್ತಿರುವುದು ನಿರಾಶೆಯನ್ನುಂಟು ಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಬೇಕು ಎಂಬುದು ಅಮೆರಿಕ ಮತ್ತು ಚೀನಾದ ಆದ್ಯತೆ ಮತ್ತು ಗುರಿಯೂ ಆಗಿದೆ. ಆದರೆ, ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಯತ್ನ ವಿಫಲವಾದದ್ದೇ ಆದಲ್ಲಿ, ಶಾಂತಿ– ಸ್ಥಿರತೆ ನೆಲೆಸಬೇಕು ಎಂಬ ಉಭಯ ದೇಶಗಳ ಉದ್ದೇಶವೇ ತಲೆಕೆಳಗಾಗುತ್ತದೆ’ ಎಂದೂ ಅವರು
ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.