ಒಟ್ಟಾವ: ಖಾಲಿಸ್ತಾನ ಪ್ರತ್ಯೇಕತಾ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ಆರೋಪಿಗಳಾದ ಮೂವರು ಭಾರತೀಯರು ಕೆನಡಾ ನ್ಯಾಯಾಲಯದ ಮುಂದೆ ಮೊದಲ ಬಾರಿಗೆ ಖುದ್ದು ಹಾಜರಾದರು. ಈ ವೇಳೆ ಯಾವುದೇ ಸಮುದಾಯದ ಜೊತೆ ಸಂಪರ್ಕ ಹೊಂದದಂತೆ ಆರೋಪಿಗಳಿಗೆ ನ್ಯಾಯಾಲಯ ಸೂಚಿಸಿತು.
ಕರಣ್ ಬ್ರಾರ್(22), ಕಮಲ್ ಪ್ರೀತ್ ಸಿಂಗ್(22), ಕರಣ್ ಪ್ರೀತ್ ಸಿಂಗ್(28) ಅವರು ಸರ್ರೆಯಲ್ಲಿರುವ ಬ್ರಿಟಿಷ್ ಕೊಲಂಬಿಯಾ ಪ್ರಾಂತೀಯ ನ್ಯಾಯಾಲಯಕ್ಕೆ ಹಾಜರಾದರು. ಮತ್ತೊಬ್ಬ ಆರೋಪಿ ಅಮನ್ದೀಪ್ ಸಿಂಗ್(22) ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದರು.
ನ್ಯಾಯಾಲಯಕ್ಕೆ ಖುದ್ದು ಹಾಜರಾದವರು ಕೆಂಪು ಬಣ್ಣದ ಜೈಲಿನ ಉಡುಗೆಯನ್ನು ತೊಟ್ಟಿದ್ದರು. ಮೇ 10ರಂದು ಒಂಟಾರಿಯೊದಲ್ಲಿ ಬಂಧನಕ್ಕೀಡಾಗಿರುವ ಅಮನ್ದೀಪ್ ಸಿಂಗ್ ಕಸ್ಟಡಿ ಮುಂದುವರಿದಿದೆ.
ನ್ಯಾಯಾಧೀಶ ಮಾರ್ಕ್ ಜೆಟ್ಟೆ ಒಂಟರ್ಸೆಪ್ಟರ್ ಮೂಲಕ ಆರೋಪಿಗಳ ಜೊತೆ ಮಾತನಾಡಿದರು. ಬಳಿಕ, ಮುಂದಿನ ವಿಚಾರಣೆಯನ್ನು ಜೂನ್ 25ಕ್ಕೆ ಮುಂದೂಡಿದರು.
‘ಈ ಪ್ರಕರಣದಲ್ಲಿ ಮಾತ್ರ ಇಷ್ಟು ಪ್ರಮಾಣದ ಸಮುದಾಯದ ಹಿತಾಸಕ್ತಿ ಏಕೆ? ಆರೋಪಿಗಳು ನ್ಯಾಯಸಮ್ಮತ ವಿಚಾರಣೆಗೆ ಅರ್ಹರು’ಎಂದು ಕರಣ್ ಬ್ರಾರ್ ಪರ ಹಾಜರಾಗಿದ್ದ ವಕೀಲ ರಿಚರ್ಡ್ ಫೊವ್ಲರ್ ಹೇಳಿದ್ದಾರೆ.
ಆರೋಪಿಗಳು ನ್ಯಾಯಾಲಯ ಪ್ರವೇಶಕ್ಕೂ ಮುನ್ನ, ನಿಜ್ಜರ್ ಬೆಂಬಲಿಗರು ಮತ್ತು ಸಿಖ್ ಪ್ರತ್ಯೇಕತಾವಾದಿ ಹೋರಾಟಗಾರರು ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸಿದರು.