ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಆರೋಪ: ಅಮೆರಿಕ ನಿರಾಕರಣೆ

ನಮ್ಮ ಪಾತ್ರ ಖಂಡಿತವಾಗಿ ಇಲ್ಲ –ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್
Published 10 ಮೇ 2024, 15:44 IST
Last Updated 10 ಮೇ 2024, 15:44 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಭಾರತದಲ್ಲಿ ಸದ್ಯ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ’ ಎಂಬ ರಷ್ಯಾದ ಆರೋಪವನ್ನು ಅಮೆರಿಕವು ತಳ್ಳಿಹಾಕಿದೆ.

‘ಖಂಡಿತವಾಗಿ ಇಲ್ಲ. ಭಾರತದಲ್ಲಿನ ಚುನಾವಣೆಯಲ್ಲಿ ನಮ್ಮ ಪಾತ್ರವಿಲ್ಲ. ಅದು, ಭಾರತದ ಜನರು ತೆಗೆದುಕೊಳ್ಳ
ಬೇಕಾದ ನಿರ್ಧಾರ. ಅಲ್ಲದೆ, ವಿಶ್ವದ ಯಾವುದೇ ಚುನಾವಣೆಯಲ್ಲಿ ನಾವು ಪಾತ್ರ ವಹಿಸುವುದಿಲ್ಲ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸ್ಪಷ್ಟಪಡಿಸಿದ್ದಾರೆ.

ಖಲಿಸ್ತಾನಿ ಪ್ರತ್ಯೇಕತವಾದಿ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್ ಪನ್ನು ಹತ್ಯೆಯ ಸಂಚಿನಲ್ಲಿ ಭಾರತದ ಗುಪ್ತದಳದ ಅಧಿಕಾರಿಯ ಪಾತ್ರವಿದೆ ಎಂಬ ಆರೋಪ ಕುರಿತಂತೆ ವಾಷಿಂಗ್ಟನ್‌ ಪೋಸ್ಟ್‌ನ ಈಚಿನ ವರದಿಗೆ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಝಕರೋವಾ ಅವರ ಪ್ರತಿಕ್ರಿಯೆ ಉಲ್ಲೇಖಿಸಿ ಮಿಲ್ಲರ್ ಈ ಮಾತು ಹೇಳಿದರು.

‘ಭಾರತದ ವಿರುದ್ಧ ಅಮೆರಿಕ ಹೀಗೆ ನಿಯಮಿತವಾಗಿ ಆರೋಪಿಸುತ್ತಿದೆ. ಭಾರತವಷ್ಟೇ ಅಲ್ಲ, ವಿಶ್ವದ ಇತರೆ ರಾಷ್ಟ್ರಗಳ ವಿರುದ್ಧವೂ ಹೀಗೇ ಆರೋಪಿಸುವುದನ್ನು ನಾವು ಗಮನಿಸುತ್ತಿದ್ದೇವೆ’ ಎಂದು ಝಕರೋವಾ ಹೇಳಿದ್ದರು.

‘ಇದು, ಅಮೆರಿಕದ ವಸಾಹತುಶಾಹಿ ಧೋರಣೆಯ ಮನಸ್ಥಿತಿ. ಭಾರತದಲ್ಲಿ ಆಂತರಿಕ ರಾಜಕೀಯ ಸ್ಥಿತಿಯನ್ನು ದುರ್ಬಲಗೊಳಿಸುವುದು, ಈ ಮೂಲಕ ಚುನಾವಣೆಯನ್ನು ಸಂಕೀರ್ಣಗೊಳಿಸುವುದು ಇದರ ಉದ್ದೇಶ. ಇದು, ಭಾರತದಲ್ಲಿನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವುದರ ಭಾಗವೂ ಹೌದು’ ಎಂದು ಹೇಳಿದ್ದರು. 

ಸಂಚು ಆರೋಪ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಲು ವಕ್ತಾರ ಮಿಲ್ಲರ್‌ ನಿರಾಕರಿಸಿದರು. ‘ಸಾಬೀತು ಆಗುವವರೆಗೂ ಅದು ಆರೋಪ ಮಾತ್ರ. ಕಾನೂನಿಗೆ ಸಂಬಂಧಿಸಿದ್ದ ಕಾರಣ ನಾನು ಪ್ರತಿಕ್ರಿಯಿಸುವುದಿಲ್ಲ‘ ಎಂದರು.

ಅಮೆರಿಕನ್ನರಿಗಿಂತ ಮುಂದಿದ್ದಾರೆ: ಭಾರತದ ಪ್ರಜಾಪ್ರಭುತ್ವ ಕುರಿತ ಕಳವಳವನ್ನು ಜೋ ಬೈಡನ್‌ ಆಡಳಿತದ ಹಿರಿಯ ರಾಜತಾಂತ್ರಿಕರು ತಳ್ಳಿಹಾಕಿದ್ದು, ‘ಹಲವು ರೀತಿಯಿಂದ ಭಾರತೀಯರು ಅಮೆರಿಕನ್ನರಿಗಿಂತ ಉತ್ತಮರು’ ಎಂದಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್‌ ಗಾರ್ಸೆಟಿ, ‘ಭಾರತದಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಯುತ್ತಿದೆ. ಮುಂದಿನ 10 ವರ್ಷಗಳಲ್ಲಿ ಪ್ರಜಾಪ್ರಭುತ್ವ ಬೆಳಗಲಿದೆ’ ಎಂದರು.

‘ಅಲ್ಲಿ ಬಹುಶಃ ಕೆಟ್ಟ ಪರಿಸ್ಥಿತಿಯು ಇದೆ. ಅತ್ಯುತ್ತಮವಾದುದೂ ಇದೆ. ಅಲ್ಲಿ ಕಾಯ್ದೆ ಇದೆ. ಮತ ಚಲಾಯಿಸಲು ಎರಡು ಕಿ.ಮೀ. ನಡೆದು ಬರುತ್ತಾರೆ. ಚುನಾವಣೆ ಸಂದರ್ಭದಲ್ಲಿ ವಾಹನಗಳ ತಪಾಸಣೆ ಆಗುತ್ತದೆ. ಹಣ ಸಾಗಣೆ ಆಗುತ್ತಿಲ್ಲ ಎಂದು ಖಾತರಿಪಡಿಸಿಕೊಳ್ಳುತ್ತಾರೆ. ಕೆಲ ವಿಷಯಗಳಲ್ಲಿ ನಮಗಿಂತಲೂ ಮುಂದಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT