ನವದೆಹಲಿ /ಬೀಜಿಂಗ್ (ಪಿಟಿಐ):ಭಾರತದ ಗಡಿಯನ್ನು ಅತಿಕ್ರಮಿಸಿರುವ ಬಗೆಗಿನ ವರದಿಗಳನ್ನು ಚೀನಾ ಮಂಗಳವಾರ ಅಲ್ಲಗಳೆದಿದೆ. ಆದರೆ ಲಡಾಖ್ ನ ದೌಲತ್ ಬೇಗ್ (ಡಿಬಿಒ)ನಲ್ಲಿನ ಈ ಹಿಂದಿನ ಯಥಾಸ್ಥಿತಿಯನ್ನು ಚೀನಾ ಪಡೆಗಳು ಕಾಯ್ದುಕೊಳ್ಳಬೇಕು ಎಂದು ಭಾರತವು ಆಗ್ರಹಿಸಿದೆ.
ಈ ಪ್ರದೇಶದಲ್ಲಿ ಚೀನಾಪಡೆಗಳು ಒಳನುಸುಳಿರುವುದು ಮುಖಾಮುಖಿ ಸನ್ನಿವೇಶವನ್ನು ಸೃಷ್ಟಿಸಿದೆ ಎಂದು ಹೇಳಿರುವ ವಿದೇಶಾಂಗ ಇಲಾಖೆ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್, ಉಭಯ ದೇಶಗಳು ಸಹಿ ಹಾಕಿರುವ ಒಪ್ಪಂದದನ್ವಯವೇ ಸಮಸ್ಯೆಗೆ ಶಾಂತಿ ಪರಿಹಾರ ದೊರಕಿಸಿಕೊಳ್ಳಲು ಯತ್ನಿಸುವುದಾಗಿ ತಿಳಿಸಿದರು.
ಅತ್ತ ತಮ್ಮ ಪಡೆಗಳು ಭಾರತದ ಗಡಿಯಲ್ಲಿ ಅತಿಕ್ರಮಿಸಿಲ್ಲ ಎಂದು ಸ್ಪಷ್ಟ ಶಬ್ದಗಳಲ್ಲಿ ಹೇಳಿರುವ ಚೀನಾ, ಗಡಿ ವಿವಾದದ ಇತ್ಯರ್ಥಕ್ಕೆ ಉಭಯ ದೇಶಗಳ ನಡುವೆ ಉತ್ತಮ ವಾತಾವರಣದ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದೆ.
ಮಂಗಳವಾರ ಬೆಳಿಗ್ಗೆ ಭಾರತ ಹಾಗ ಚೀನಾ ಸೇನಾಪಡೆಗಳ ಮಧ್ಯೆ ಧ್ವಜ ಸಭೆ ನಡೆದಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಏಪ್ರಿಲ್ 15ರಂದು ಚೀನಾದ ಪಡೆಗಳು ಲಡಾಕ್ನ ದೌಲತ್ ಬೇಗ್ ಒಲ್ಡಿ(ಡಿಬಿಒ)ಯಲ್ಲಿ ಸುಮಾರು 10 ಕಿ.ಮೀನಷ್ಟು ಭಾರತದ ಗಡಿಯೊಳಗೆ ನುಸುಳಿ ಬಂದಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಈ ವಿಷಯ ಮಂಗಳವಾರ ಸಂಸತ್ತಿನ ಕಲಾಪದಲ್ಲೂ ಪ್ರತಿಧ್ವನಿಸಿತ್ತು.