ಕಾಬುಲ್ : ಅಫ್ಗಾನಿಸ್ತಾನದಲ್ಲಿ ತಕ್ಷಣ ಮತ್ತು ಶಾಶ್ವತ ಕದನ ವಿರಾಮ ಘೋಷಿಸಬೇಕು ಎನ್ನುವ ಒಕ್ಕೊರಲಿನ ಆಗ್ರಹದೊಂದಿಗೆ ಐತಿಹಾಸಿಕ ‘ಲೊಯ ಜಿರ್ಗ’ (ಶಾಂತಿ ಶೃಂಗಸಭೆ) ಶುಕ್ರವಾರ ಕೊನೆಗೊಂಡಿತು.
ಒಂದು ವಾರ ನಡೆದ ಈ ಬೃಹತ್ ಶೃಂಗಸಭೆಯಲ್ಲಿ ಧಾರ್ಮಿಕ ಮುಖಂಡರು, ಬುಡಕಟ್ಟು ನಾಯಕರು ಹಾಗೂ ರಾಜಕೀಯ ಪ್ರಮುಖರು ಸೇರಿದಂತೆ 3,200ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿ ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಮತ್ತು ತಾಲಿಬಾನ್ನೊಂದಿಗೆ ಶಾಂತಿಯುತ ಒಪ್ಪಂದದ ಸಂಭವನೀಯ ಷರತ್ತುಗಳ ಕುರಿತು ಚರ್ಚಿಸಿದರು.
ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಡಿವಾಣ ಹಾಕಲು ಮಹತ್ವದ ಹೆಜ್ಜೆ ಇರಿಸಬೇಕಿದೆ ಎಂದು ಗುರುವಾರ ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಅಧಿಕಾರಿಗಳು ಅಭಿಪ್ರಾಯಪಟ್ಟರು.
‘ಯಾವುದೇ ಕಾರಣವಿಲ್ಲದೆ ಪ್ರತಿನಿತ್ಯ ಅಫ್ಗಾನಿಗಳು ಸಾಯುತ್ತಿದ್ದಾರೆ. ಹಾಗಾಗಿ ಬೇಷರತ್ ಕದನ ವಿರಾಮ ಘೋಷಣೆಯಾಗಲೇಬೇಕು’ ಎಂದು ಶೃಂಗಸಭೆಯ ಸಮಿತಿಯೊಂದರ ಮುಖ್ಯಸ್ಥ ಮೊಹಮ್ಮದ್ ಖುರೇಷಿ ಒತ್ತಾಯಿಸಿದರು.
ಅಫ್ಗಾನ್ ನೆಲದಲ್ಲಿರುವ ವಿದೇಶಿ ಭದ್ರತಾ ಪಡೆಗಳನ್ನು ಹಿಂದಕ್ಕೆ ಕಳುಹಿಸುವುದು ಹಾಗೂ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ನಡೆಸದಂತೆ ತಾಲಿಬಾನ್ನಿಂದ ಖಾತರಿ ಪಡೆಯುವ ಕುರಿತು ಶೃಂಗಸಭೆ ಚರ್ಚಿಸಿತು.