ವಾಷಿಂಗ್ಟನ್: ಹವಾಮಾನ ವೈಪರೀತ್ಯದಿಂದ ಹಿಮಾಲಯ ಭಾಗದ, ಅದರಲ್ಲೂ ಭಾರತ–ಪಾಕಿಸ್ತಾನ ಗಡಿಯಲ್ಲಿ ಅಗಾಧ ಭೌಗೊಳಿಕ ಪರಿಣಾಮ ಉಂಟಾಗುತ್ತದೆ ಎಂದು ಅಮೆರಿಕದ ಸಂಸದ ಶೆಲ್ಡನ್ ವೈಟ್ಹೌಸ್ ಅವರು ಎಚ್ಚರಿಸಿದ್ದಾರೆ.
ಅಮೆರಿಕದ ಪ್ರಮುಖ ಚಿಂತಕರ ಚಾವಡಿ ಹಡ್ಸನ್ ಇನ್ಸ್ಟಿಟ್ಯೂಟ್ನಲ್ಲಿ ಆಯೋಜಿಸಿದ್ದ ’ಹಿಮಾಲಯ’ ಕುರಿತ ಚರ್ಚೆಯಲ್ಲಿ ಅವರು ತಮ್ಮ ವಿಚಾರ ಮಂಡಿಸಿದರು.
ಉಭಯ ದೇಶಗಳ ಬಿಕ್ಕಟ್ಟಿನ ಆಚೆಗೂ ಹವಾಮಾನ ವೈಪರೀತ್ಯವು ಹಿಮಾಲಯ ಭಾಗದಲ್ಲಿ ನೀರಿನ ಹರಿವನ್ನು ಅಸ್ಥಿರಗೊಳಿಸುತ್ತದೆ. ಇದು ವಿನಾಶಕ್ಕೂ ಕಾರಣವಾಗುತ್ತದೆ ಎಂದಿದ್ದಾರೆ.
‘ಭಾರತ ಭಾಗದಲ್ಲಿರುವ ನೀರ್ಗಲ್ಲು ಕರಗುವ ಕಾರಣ ಪಾಕಿಸ್ತಾನದ ಮುಖ್ಯ ನದಿಗಳು ತುಂಬಿ ಹರಿಯುತ್ತವೆ. ಹಿಮ ಹೆಚ್ಚು ಕರಗುವುದರಿಂದ ನದಿ ನೀರಿನ ಹರಿವಿನಲ್ಲಿ ಹೆಚ್ಚಳವಾಗುತ್ತದೆ. ಮುಂಗಾರು ವೇಳೆ ಭಾರಿ ಮಳೆ ಉಂಟಾಗಲೂ ಹವಾಮಾನ ವೈಪರೀತ್ಯ ಕಾರಣವಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ಹವಾಮಾನ ವೈಪರೀತ್ಯದಿಂದ 2100ರ ವೇಳೆಗೆ ಹಿಮಾಲಯದ ನೀರ್ಗಲ್ಲಿನ ಮೂರು ಭಾಗ ಕಡಿತವಾಗಲಿದೆ ಎಂದು ಅವರು ಅಧ್ಯಯನವೊಂದನ್ನು ಉಲ್ಲೇಖಿಸಿ ಹೇಳಿದ್ದಾರೆ.