ನಮ್ಮ ತಂದೆ ತಮ್ಮ ಸತತ ಪ್ರಯತ್ನದಿಂದ 1969ರ ಮೇ ತಿಂಗಳಲ್ಲಿ ಅಂದಿನ ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ (ಇಂದಿನ ಬಿ.ಡಿ.ಎ.) ಮೂಲಕ ಬೆಂಗಳೂರು ಜಯನಗರ 9ನೇ ಬ್ಲಾಕಿನಲ್ಲಿ 30X40 ಅಡಿ ನಿವೇಶನವನ್ನು ಪಡೆಯುವಲ್ಲಿ ಸಫಲರಾಗಿದ್ದರು.
ಮುಂದೆ ಸಾಲ ಹಾಗೂ ಕಟ್ಟಲಿರುವ ಮನೆ ನಕ್ಷೆಯ ಮಂಜೂರಾತಿಗಳಿಗಾಗಿ ತಯಾರಿ ನಡೆಸಿದ್ದಾಯ್ತು. ಮನೆ ಕಟ್ಟುವ ಗುತ್ತಿಗೆ ಕೆಲಸವನ್ನು ಮಾಡುತ್ತಿದ್ದ ನಮ್ಮ ತಂದೆಯ ಸಹೋದ್ಯೋಗಿ ಮಿತ್ರರೊಬ್ಬರು ಮನೆ ಕಟ್ಟಿಸಿಕೊಡಲು ಮುಂದಾದರು.
ಇಷ್ಟೆಲ್ಲಾ ಸಿದ್ಧತೆಯ ನಂತರ 1970ರ ಏಪ್ರಿಲ್ ತಿಂಗಳಿನಲ್ಲಿ ಗುದ್ದಲಿ ಪೂಜೆ ನೆರವೇರೆಸಿದೆವು. ಮೇ ತಿಂಗಳಲ್ಲಿ ಪಾಯದ ಕೆಲಸ ನಡೆಯುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಇಪ್ಪತ್ತರ ಹರೆಯದ ನನ್ನ ಹಿರಿಯಕ್ಕ ಜಯಂತಿ ಅನಾರೋಗ್ಯಕ್ಕೆ ಒಳಗಾದಳು. ಆವಳನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು, ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಳು.
ಈ ಆಘಾತದಿಂದ ಕುಸಿದುಹೋದ ನಮ್ಮ ತಂದೆ ಮನೆ ಕಟ್ಟುವುದನ್ನು ನಿಲ್ಲಿಸಿಬಿಡುವುದಾಗಿ ಹೇಳತೊಡಗಿದರು. ಆ ಸಮಯದಲ್ಲಿ ನಮ್ಮ ತಂದೆಯ ಸಹೋದ್ಯೋಗಿ ಹಾಗೂ ಮಿತ್ರರಾಗಿದ್ದ ಕಂಟ್ರ್ಯಾಕ್ಟರ್ ಸಮಾಧಾನ ಹೇಳಿ ಎಲ್ಲಾ ಜವಾಬ್ದಾರಿಯನ್ನು ತಾವು ತೆಗೆದುಕೊಂಡು ಕಟ್ಟಡದ ಕೆಲಸವನ್ನು ಆದಷ್ಟು ಬೇಗನೆ ಮುಗಿಸಿಕೊಡುವುದಾಗಿ ಭರವಸೆ ನೀಡಿದರು.
ನುಡಿದಂತೆಯೇ1970ರ ಡಿಸೆಂಬರ್ ವೇಳೆಗೆ ಮನೆಯನ್ನು ಸಂಪೂರ್ಣಗೊಳಸಿದರು. ನಮ್ಮ ತಂದೆ ತಮ್ಮ ಹಿರಿಯ ಪುತ್ರಿಯ ನೆನಪಲ್ಲಿ ಹೊಸ ಮನೆಗೆ ಅವಳ ಹೆಸರನ್ನೇ ಇಟ್ಟರು.
-ಎಚ್.ಎಸ್.ಶ್ರೀಮತಿ