ಬೆಂಗಳೂರು, ಮಾ. 3– ಆರ್ಥಿಕ ಅಸಮಾನತೆಯ ಅಂತರ ಹೆಚ್ಚಿ ನಕ್ಸಲೀಯ ಚಟುವಟಿಕೆಗಳ ಪ್ರಭಾವಕ್ಕೊಳಗಾಗುತ್ತಿರುವ ರಾಜ್ಯದ ಗಡಿ ಜಿಲ್ಲೆಗಳಲ್ಲಿ ತ್ವರಿತವಾಗಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಆಂಧ್ರದ ಗಡಿಗೆ ಹೊಂದಿಕೊಂಡಿರುವ ಐದು ಜಿಲ್ಲೆಗಳ ಎಂಟು ತಾಲ್ಲೂಕುಗಳಲ್ಲಿ ತಲಾ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಬರುವ ಏಪ್ರಿಲ್ ಒಂದರಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಉದ್ದೇಶಿಸಿದೆ.
ಗಡಿಯಲ್ಲಿರುವ ಬೀದರ್, ಕಲ್ಬುರ್ಗಿ, ಕೋಲಾರ, ರಾಯಚೂರು ಜಿಲ್ಲೆಗಳಲ್ಲಿ ಶೀಘ್ರ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿ ಕೊಳ್ಳಬೇಕು ಎಂದು ನಾಲ್ಕು ವರ್ಷಗಳಷ್ಟು ಹಿಂದೆಯೇ ಗುಪ್ತದಳದ ಡಿಐಜಿಯೊಬ್ಬರು ನೀಡಿರುವ ವರದಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಹೆಗಡೆ ಕಿಡಿ– ದಳದಲ್ಲಿ ಬಿರುಗಾಳಿ
ಬೆಂಗಳೂರು, ಮಾ. 3– ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ ಆಯ್ಕೆ ವಿಧಾನವನ್ನು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಪ್ರತಿಭಟಿಸುವ ಮೂಲಕ ಹಾರಿಸಿದ ಕಿಡಿ ಈಗ ಗಾಳಿಗೆ ಸಿಕ್ಕಂತಾಗಿ ದಳದ ರಾಜ್ಯ ಘಟಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.