ಶೇಷನ್ ‘ಅಧಿಕ ಪ್ರಸಂಗ’ಕ್ಕೆ ಸುಪ್ರೀಂ ಕೋರ್ಟ್ ತರಾಟೆ ನವದೆಹಲಿ, ಏ. 4 (ಪಿಟಿಐ, ಯುಎನ್ಐ)– ಮುಖ್ಯ ಚುನಾವಣಾಧಿಕಾರಿ ಟಿ.ಎನ್. ಶೇಷನ್ ಅವರು ನ್ಯಾಯಾಂಗ ಸೇರಿ ಎಲ್ಲ ಸಾಂವಿಧಾನಿಕ ಅಧಿಕಾರಗಳನ್ನು ಕೈವಶ ಮಾಡಿಕೊಳ್ಳಲು ಯತ್ನಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟು ಇಂದು ಉಗ್ರವಾಗಿ ಟೀಕಿಸಿತು.
ಅಲ್ಲದೆ ಮುಂದಿನ ತಿಂಗಳು ನಡೆಯಲಿರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಅವರ ಅಧಿಕಾರವನ್ನು ಮೊಟಕುಗೊಳಿಸಿತು.
‘ಶೇಷನ್ ಅವರು ಎಲ್ಲ ಸಂವಿಧಾನ ಸೃಷ್ಟಿತ ಅಧಿಕಾರಗಳನ್ನು ತಮ್ಮ ವಶಕ್ಕೆ ಪಡೆಯುತ್ತಿರುವಂತೆ ತೋರುತ್ತಿದೆ. ಈಗ ಅವರು ನ್ಯಾಯಾಂಗದ ಅಧಿಕಾರ ಚಲಾಯಿಸಲು ಯತ್ನಿಸುತ್ತಿದ್ದಾರೆ. ಅವರು ತಮ್ಮ ಅಧಿಕಾರದ ಸೀಮೆಗಳನ್ನು ಅರಿತುಕೊಳ್ಳುವುದು ಅಗತ್ಯ’ ಎಂದು ಸುಪ್ರೀಂಕೋರ್ಟಿನ ವಿಭಾಗ ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಜೆ.ಎಸ್. ವರ್ಮಾ ಮತ್ತು ಎಸ್.ಪಿ. ಭರೂಚಾ ಅವರು ಇಂದು ವಿಚಾರಣೆ ವೇಳೆಯಲ್ಲಿ ನುಡಿದರು.
ಹತ್ಯೆ ಯತ್ನ: ಮುಲಾಯಂ ಪಾರು ಲಖನೌ, ಏ. 4 (ಪಿಟಿಐ)– ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಹತ್ಯೆಗೆ ಇಂದು ವಿಫಲ ಯತ್ನ ನಡೆಯಿತು. ಯಾದವ್ ಅವರನ್ನು ಇರಿಯಲು ಬಂದ ದುಷ್ಕರ್ಮಿಯನ್ನು ಜಾಗೃತ ಭದ್ರತಾ ಸಿಬ್ಬಂದಿ ಸೆರೆ ಹಿಡಿದರು.