ದಿನೇಶ್ ನೇಮಕ ರದ್ದು ಬೆಂಗಳೂರು, ನ. 15– ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಪ್ರತಿಭಟನೆಯ ಪರಿಣಾಮವಾಗಿ ದಿವಂಗತ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಪುತ್ರ ದಿನೇಶ್ ಅವರನ್ನು ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ಮಾಡಿದ್ದ ನೇಮಕ ರದ್ದಾಗಿ, ಉಂಟಾಗಿದ್ದ ಬಿಕ್ಕಟ್ಟು ಬಗೆಹರಿದಿದೆ.
ಯುವ ಕಾಂಗೈ ಸಂವಿಧಾನದಲ್ಲಿ ಕಾರ್ಯಾಧ್ಯಕ್ಷರ ನೇಮಕ ಮಾಡುವಂತಿಲ್ಲ. ಈಗಿನ ಅಧ್ಯಕ್ಷರು ಚುನಾವಣೆಗೆ ನಿಂತಿರುವುದರಿಂದ ಈ ಹುದ್ದೆ ಸೃಷ್ಟಿಸುವ ಆಲೋಚನೆ ಇತ್ತು; ನೇಮಕ ಮಾಡಿರಲಿಲ್ಲ. ಸಮಿತಿಯ ಒಬ್ಬ ಪ್ರಧಾನ ಕಾರ್ಯದರ್ಶಿಯಾಗಿರುವ ದಿನೇಶ್ ಆ ಹುದ್ದೆಯಲ್ಲಿಯೇ ಮುಂದುವರಿಯುತ್ತಾರೆ ಎಂದು ಪ್ರದೇಶ ಕಾಂಗ್ರೆಸ್ ವಕ್ತಾರ ಎಂ.ವಿ. ರಾಜಶೇಖರನ್ ತಿಳಿಸಿದರು.
ಭಾರತದೊಡನೆ ಸ್ನೇಹ: ಪಾಕ್ ಮೇಲೆ ಒತ್ತಡಕ್ಕೆ ರಾವ್ ಕರೆ ನವದೆಹಲಿ, ನ. 15 (ಯುಎನ್ಐ)– ಭಾರತದ ಜತೆಗೆ ಪಾಕಿಸ್ತಾನವು ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳುವಂತೆ ಪ್ರಭಾವ ಬೀರಲು ಅಂತರ್ರಾಷ್ಟ್ರೀಯ ಸಮುದಾಯವನ್ನು ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಇಂದು ಆಗ್ರಹಪಡಿಸಿದ್ದಾರೆ.