ಮರುಕಳಿಸಿದ ಪ್ಲೇಗ್ ಮಾರಿ: ಸೂರತ್ನಲ್ಲಿ 67 ಜನ ಸಾವು– ಒಂದು ಲಕ್ಷ ಮಂದಿ ವಲಸೆ
ಸೂರತ್, ಸೆ. 22 (ಯುಎನ್ಐ, ಪಿಟಿಐ)– ಗುಜರಾತ್ನ ವಜ್ರದ ಉದ್ಯಮಗಳ ನಗರ ಸೂರತ್ನಲ್ಲಿ ಸಾಂಕ್ರಾಮಿಕ ಪಿಡುಗಿನ ಭಯಂಕರ ರೂಪ ತಳೆದಿರುವ ಪ್ಲೇಗ್ ರೋಗ ಕಳೆದ 24 ಗಂಟೆಗಳಲ್ಲಿ 67 ಜನರನ್ನು ಬಲಿ ತೆಗೆದುಕೊಂಡಿದ್ದು, ಲಕ್ಷಕ್ಕೂ ಹೆಚ್ಚು ಜನ ಭೀತಿಯಿಂದ ವಲಸೆ ಹೋಗಿದ್ದಾರೆ.
ಆದರೆ ಅಧಿಕೃತ ಮೂಲಗಳ ಪ್ರಕಾರ ಸತ್ತವರ ಸಂಖ್ಯೆ 24. ಜನ ನಗರ ತ್ಯಜಿಸುವುದನ್ನು ತಡೆಯಲು ರೋಗಪೀಡಿತ ಪ್ರದೇಶಗಳಿಂದ ಹೊರಹೋಗುವ ಎಲ್ಲ ಮಾರ್ಗಗಳನ್ನು ಮುಚ್ಚಲಾಗಿದೆ. ಚಿತ್ರಮಂದಿರಗಳು ಮತ್ತು ಉದ್ಯಾನಗಳಿಗೆ ಜನ ಹೋಗುವುದನ್ನು ಏಳು ದಿನಗಳ ಕಾಲ ನಿಷೇಧಿಸಲಾಗಿದೆ.
88 ತಾಲ್ಲೂಕಿನಲ್ಲಿ ಬರ: ಧರ್ಮಸಿಂಗ್
ಬೆಂಗಳೂರು, ಸೆ. 22– ರಾಜ್ಯದ ಹದಿಮೂರು ಜಿಲ್ಲೆಗಳ ಎಂಬತ್ತೆಂಟು ತಾಲ್ಲೂಕುಗಳ 6,700 ಗ್ರಾಮಗಳಲ್ಲಿ ಬರಸ್ಥಿತಿ ಇದ್ದು ಒಂದೆರಡು ವಾರಗಳಲ್ಲಿ ಮಳೆ ಬರದಿದ್ದರೆ ಸ್ಥಿತಿ ತೀರಾ ಹದಗೆಟ್ಟು ಭೀಕರ ಪರಿಣಾಮ ಉಂಟಾಗುವುದು ಎಂದು ಕಂದಾಯ ಸಚಿವ ಧರ್ಮಸಿಂಗ್ ಇಂದು ಇಲ್ಲಿ ಹೇಳಿದರು.
ಅಭಾವ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಬಗೆಗೆ ಚರ್ಚಿಸಲು ಮುಖ್ಯಮಂತ್ರಿ ಅವರು ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಗಳ ಮುಖ್ಯಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರ ಸಭೆಯನ್ನು ಈ ತಿಂಗಳ 24ರಂದು ಕರೆದಿದ್ದಾರೆ ಎಂದರು.
ಸಿನಿಮಾಗಳಲ್ಲಿ ಅಶ್ಲೀಲತೆ ನಿಯಂತ್ರಣಕ್ಕೆ ಮಾನವ ಹಕ್ಕು ಆಯೋಗ ಬೆಂಬಲ
ನವದೆಹಲಿ, ಸೆ. 22 (ಯುಎನ್ಐ)– ಸಿನಿಮಾ ಮತ್ತು ಸಮೂಹ ಮಾಧ್ಯಮಗಳಲ್ಲಿ ಹಿಂಸೆ, ಅಶ್ಲೀಲತೆ ನಿಯಂತ್ರಣಕ್ಕೆ ಪ್ರಾರಂಭಿಸುವ ಯಾವುದೇ ಚಳವಳಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಬೆಂಬಲಿಸುವುದು ಎಂದು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಇಂದು ಇಲ್ಲಿ ಭರವಸೆ ನೀಡಿದರು.
ಸಮೂಹ ಮಾಧ್ಯಮಗಳಲ್ಲಿ ಅಶ್ಲೀಲತೆ ಹಿಂಸೆ ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು. ‘ಸಿನಿಮಾಗಳು ಹುಚ್ಚೆದ್ದವರಂತೆ ವರ್ತಿಸುತ್ತಿವೆ. ಸೆನ್ಸಾರ್ ನಿಯಮಗಳು ಅಸ್ತಿತ್ವದಲ್ಲಿದ್ದರೂ ಜಾರಿಯಾಗುತ್ತಿಲ್ಲ ಎಂದು ಹೇಳಿದರು.