ಪ್ರಣವ್ಗೆ ವಿದೇಶಾಂಗ ವ್ಯವಹಾರ ಸಿಂಧ್ಯಾಗೆ ಮಾನವ ಸಂಪನ್ಮೂಲ
ನವದೆಹಲಿ, ಫೆ. 10 (ಪಿಟಿಐ): ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ನೂತನ ಸಚಿವರಿಗೆ ಖಾತೆಗಳನ್ನು ಹಂಚಿ, ಕೆಲವು ಸಚಿವರ ಖಾತೆಗಳಲ್ಲಿ ಮಹತ್ವದ ಬದಲಾವಣೆ ಮಾಡಿದ್ದಾರೆ. ಪ್ರಣವ್ ಮುಖರ್ಜಿ ಅವರು ಈಗ ವಾಣಿಜ್ಯ ಖಾತೆಯ ಬದಲಿಗೆ ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ.
ಅಜಿತ್ ಸಿಂಗ್ ಅವರಿಗೆ ಆಹಾರ ಖಾತೆ ನೀಡಲಾಗಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಮಾಧವ ರಾವ್ ಸಿಂಧ್ಯಾ ಅವರಿಗೆ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ, ಸಾರ್ವಜನಿಕ ವಿತರಣೆ ಖಾತೆ ಬೂಟಾ ಸಿಂಗ್ ಅವರಿಗೆ ಲಭಿಸಿದೆ.
ಬೇಡ್ತಿ ಯೋಜನೆ ಸದ್ಯಕ್ಕೆ ರದ್ದು
ಹುಬ್ಬಳ್ಳಿ, ಫೆ. 10: ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರವಾದಿಗಳ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಬೇಡ್ತಿ ವಿದ್ಯುಚ್ಛಕ್ತಿ ಯೋಜನೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಇಲ್ಲಿ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿನ ಕೈಗಾ ವಿದ್ಯುತ್ ಯೋಜನೆ ಮುಗಿದ ನಂತರ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯನ್ನು ಬಳಸಿಕೊಳ್ಳಲು ಕೈಗಾದಿಂದ ಶಿರಸಿವರೆಗೆ ಈಗ ವಿದ್ಯುತ್ ತಂತಿ ಮಾರ್ಗ ಎಳೆಯಲಾಗುತ್ತಿದೆ. ಈ ಕಾರ್ಯಕ್ಕಾಗಿ ಕಾಡು ನಾಶ ಮಾಡಬೇಡಿ ಎಂದು ಸೂಚಿಸಲಾಗಿದೆ ಎಂದು ನುಡಿದರು.