ನವದೆಹಲಿ, ಡಿ.18– ತನ್ನ ನೌಕರರ ಮುಷ್ಕರಗಳನ್ನು ನಿಷೇಧಿಸಲು ಸರಕಾರಕ್ಕೆ ಅಧಿಕಾರ ಕೊಡುವ ಮತ್ತು ಎಲ್ಲ ಹಂತಗಳಲ್ಲೂ ವಿವಾದ, ಘರ್ಷಣೆಗಳಿಗೆ ತುತ್ತಾಗಿದ್ದ ಅವಶ್ಯ ಸೇವಾ ವ್ಯವಸ್ಥೆ ಪಾಲನೆ ಮಸೂದೆಯನ್ನು ಬಹುತೇಕ ವಿರೋಧಿ ಸದಸ್ಯರು ಹಾಗೂ ಪಕ್ಷೇತರರು ಸಭಾತ್ಯಾಗ ಮಾಡಿದ ನಂತರ ಲೋಕಸಭೆ ಇಂದು ಅಂಗೀಕರಿಸಿತು.
ಮುಂಬೈನಲ್ಲಿ ‘ಮಾವೋ’ ದಹನ
ಮುಂಬೈ, ಡಿ.18– ಮಾವೋ ಮುರ್ದಾಬಾದ್ ಎಂಬ ಸಹಸ್ರಾರು ಜನರ ಒಕ್ಕೊರಲಿನ ಘೋಷಣೆಯ ನಡುವೆ ಇಂದು ಇಲ್ಲಿನ ಫ್ಲೋರಾ ಫೌನ್ಟನ್ ಬಳಿ ಮಾವೋ ಪ್ರತಿಕೃತಿಯ ದಹನವಾಯಿತು.
ಹಳೆಯ ಬೂಟುಗಳ ಮಾಲೆಯಿಂದ ಅಲಂಕೃತವಾಗಿದ್ದ ಮಾವೋ ಪ್ರತಿಮೆಯನ್ನು ಚಟ್ಟದಲ್ಲಿಡಲಾಗಿತ್ತು.
ಅಧ್ಯಕ್ಷ ಜಾನ್ಸನ್ನರಿಗೆ ‘ಏಷ್ಯಾ ಫ್ಲ್ಯೂ’
ವಾಷಿಂಗ್ಟನ್, ಡಿ.18– ಅಮೆರಿಕದ ಅಧ್ಯಕ್ಷ ಜಾನ್ಸನ್ ಅವರನ್ನು ಇಂದು ನೌಕಾ ಆಸ್ಪತ್ರೆಗೆ ಸೇರಿಸಲಾಗಿದೆ. ಅವರು ನೆಗಡಿ ಮತ್ತು ಜ್ವರದಿಂದ ನರಳುತ್ತಿದ್ದಾರೆ.
ಇಂದು ‘ಕುವೆಂಪು’ ಗೆ ಪ್ರಶಸ್ತಿ ಪ್ರದಾನ
ನವದೆಹಲಿ, ಡಿ.18– ಡಾ. ಕೆ.ವಿ. ಪುಟ್ಟಪ್ಪ ಮತ್ತು ಶ್ರೀ ಉಮಾಶಂಕರ ಜೋಷಿ ಅವರಿಗೆ ಡಿಸೆಂಬರ್ 19ರಂದು ಇಲ್ಲಿ ನಡೆಯುವ ಸಮಾರಂಭದಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಶ್ರೀ ಬಿ. ಗೋಪಾಲ ರೆಡ್ಡಿಯವರು ಸಮಾರಂಭದ ಅಧ್ಯಕ್ಷತೆ ವಹಿಸುವರು.
‘ಶ್ರೀ ರಾಮಾಯಣ ದರ್ಶನಂ’ ಮತ್ತು ‘ನಿಶೀಥ’ ಕೃತಿಗಳಿಗೆ ಪ್ರಶಸ್ತಿ ಪಡೆದ ಈ ಸರಸ್ವತೀ ಪುತ್ರರಿಬ್ಬರಿಗೂ ಕಂಚಿನ ವಾಗ್ದೇವಿ ಪ್ರತಿಮೆ, ತಲಾ 50 ಸಾವಿರ ರೂ. ಚೆಕ್ ನೀಡಲಾಗುವುದು.