ಗಾಂಧೀಜಿ ಜನ್ಮಸ್ಥಳದಲ್ಲೇ ಹರಿಜನರಿಗೆ ಪ್ರತ್ಯೇಕ ನಲ್ಲಿ
ನವದೆಹಲಿ, ಜ. 31 – ಗಾಂಧೀಜಿಯವರು ಹರಿಜನರೆಂದು ಕರೆದ ಪರಿಶಿಷ್ಟ ವರ್ಗದ ಪೌರರು, ಮಹಾತ್ಮ ಗಾಂಧಿಯ ಜನ್ಮಸ್ಥಳವಾದ ಪೋರ್ಬಂದರ್ನಲ್ಲಿ ಸಾರ್ವಜನಿಕ ನಲ್ಲಿಗಳಿಂದ ನೀರು ಹಿಡಿಯುವಂತಿಲ್ಲ.
ನಗರದಲ್ಲಿ ಹರಿಜನರಿಗೆ ಪ್ರತ್ಯೇಕ ನಲ್ಲಿಗಳಿವೆ. ಅಸ್ಪೃಶ್ಯತೆ ಕುರಿತ ಸಮಿತಿಯ ಅಧ್ಯಕ್ಷ ಎಳೆಯ ಪೆರುಮಾಳ್ ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಸರ್ಕಾರಿ ಕಾಲೇಜುಗಳಲ್ಲಿರುವ ಹರಿಜನ ವಿದ್ಯಾರ್ಥಿಗಳು ಸಾರ್ವಜನಿಕರ ಜತೆ ಭೋಜನದಲ್ಲಿ ಬೆರೆಯುವಂತಿಲ್ಲ. ರಾಜಸ್ಥಾನದಲ್ಲಿ ಹರಿಜನರಿಗೆ ಮೀಸಲಾದ ಸ್ಥಾನ ಹಿಂದೂಗಳಿಗೆ ಹೋಗಿದೆ.
ಕಳೆದ 3 ವರ್ಷಗಳಲ್ಲಿ ಹರಿಜನರ ಬಗ್ಗೆ ಬ್ರಾಹ್ಮಣರ ಮನೋಭಾವ ತೀವ್ರವಾಗಿ ಬದಲಾಗುತ್ತಿದೆ. ಅವರನ್ನು ಬ್ರಾಹ್ಮಣರು ಈಗ ಉತ್ತಮವಾಗಿ ಕಾಣುತ್ತಿದ್ದಾರೆ. ಕೇರಳದಲ್ಲಿ ಅಸ್ಪೃಶ್ಯತೆ ಕಡಿಮೆ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಭೀಕರ ಎಂದು ಪೆರುಮಾಳ್ ಹೇಳಿದ್ದಾರೆ.
ಅಣ್ಣಾ ಸ್ಥಿತಿ ಇನ್ನೂ ವಿಷಮ, ಆದರೂ ಹಿಂದಿಗಿಂತ ಈಗ ಆಶಾದಾಯಕ
ಮದ್ರಾಸ್, ಜ. 31– ಮುಖ್ಯಮಂತ್ರಿ ಅಣ್ಣಾದೊರೆ ಅವರ ಆರೋಗ್ಯ ಇನ್ನೂ ವಿಷಮವಾಗಿಯೇ ಇದ್ದರೂ ಹಿಂದಿಗಿಂತ ಈಗ ಅವರ ದೇಹಸ್ಥಿತಿ ಮತ್ತಷ್ಟು ಆಶಾದಾಯಕವಾಗಿದೆಯೆಂದು ಇಂದು ರಾತ್ರಿ 8.45ರಲ್ಲಿ ವೈದ್ಯರು ನೀಡಿದ ಪ್ರಕಟಣೆ ತಿಳಿಸಿದೆ.
ಅಣ್ಣಾದೊರೆ ಅವರ ರಕ್ತದ ಒತ್ತಡ , ನಾಡಿ ಮಿಡಿತ ಮತ್ತು ಶ್ವಾಸೋಚ್ಛ್ವಾಸವನ್ನು ವೈದ್ಯರು ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸುತ್ತಿದ್ದಾರೆ. ಅವು ಮಾಮೂಲು ಸ್ಥಿತಿಯಲ್ಲಿವೆ.
ಲಾಟರಿ: ಪೌರಸಮಿತಿ ವಿರೋಧ
ಬೆಂಗಳೂರು, ಜ. 31– ಮೈಸೂರು ಸರಕಾರ ಲಾಟರಿ ಜಾರಿಗೆ ತರುವುದಕ್ಕೆ ಪೌರಸಮಿತಿಯು ವಿರೋಧವನ್ನು ವ್ಯಕ್ತಪಡಿಸಿದೆ. ಸರಕಾರ ಇದನ್ನು ಕೈಬಿಡದಿದ್ದರೆ ‘ಲಾಟರಿಯ ದುಷ್ಪರಿಣಾಮಗಳ ಬಗ್ಗೆ’ ಜನರಿಗೆ ತಿಳಿವಳಿಕೆ ನೀಡಲು ಕಾರ್ಯಕ್ರಮ ಕೈಗೊಳ್ಳುವುದಾಗಿ ಪೌರ ಸಮಿತಿ ಅಧ್ಯಕ್ಷರಾದ ಶ್ರೀ ಕೆ.ಎಂ. ನಾಗಣ್ಣನವರು ಇಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.