ಒಂದೂವರೆ ವರ್ಷದ ಆ ಪುಟ್ಟ ಬಾಲೆ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಬಳಿಯ ಹಳ್ಳಿಯೊಂದರ ದಂಪತಿಯ ಒಬ್ಬಳೇ ಮಗಳು. ಬಹಳ ವರ್ಷದ ನಂತರ ಹುಟ್ಟಿದ್ದರಿಂದ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ, ಆ ರಾತ್ರಿ ಮನೆಯ ವರಾಂಡದಲ್ಲಿ ಒಣಹಾಕಿದ್ದ ಅಡಿಕೆ ಗೋಟನ್ನು ಮಗು ಆಟವಾಡುತ್ತಾ ಆಕಸ್ಮಿಕವಾಗಿ ಬಾಯಲ್ಲಿ ಹಾಕಿಕೊಂಡು ನುಂಗಿತ್ತು. ಅಡಿಕೆ ಗೋಟು ಸೀದಾ ಬಾಲಕಿಯ ಶ್ವಾಸನಾಳದಲ್ಲಿ ಸಿಲುಕಿಕೊಂಡಿತ್ತು. ಅಳುತ್ತಾ ಒದ್ದಾಡುತ್ತಿದ್ದ ಮಗುವಿಗೆ ಉಸಿರಾಡಲು ಕಷ್ಟವಾಗಿದೆ. ಅಡಿಕೆ ಗೋಟು ತೆಗೆಯಲು ಎಲ್ಲ ಪ್ರಯತ್ನ ನಡೆಸಿದ್ದ ಪಾಲಕರು, ಮಗುವಿನ ಉಸಿರಾಟ ಕ್ಷೀಣವಾಗುತ್ತಿರುವುದನ್ನು ಕಂಡು ಆಸ್ಪತ್ರೆಗೆ ಧಾವಿಸಿದ್ದರು.