ಆಳಂದ ಶಾಸಕ ಬಿ.ಆರ್.ಪಾಟೀಲರು ಕರೆ ಮಾಡಿದ್ದರು. ಮಹಾನಗರಗಳಿಗೆ ದುಡಿಯಲು ವಲಸೆ ಹೋಗುವವರ ಬಗ್ಗೆ ತಾವು ಹಲವು ಸಂದರ್ಭಗಳಲ್ಲಿ ಧ್ವನಿ ಎತ್ತಿರುವುದನ್ನು ಪ್ರಸ್ತಾಪಿಸಿದರು. ಜನರು ದುಡಿಯಲು ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎನ್ನುವ ನನ್ನ ಸಲಹೆಯನ್ನು ಒಪ್ಪದೆ ಸಣ್ಣಗೆ ಆಕ್ಷೇಪ ವ್ಯಕ್ತಪಡಿಸಿದರು.
‘ಕೈಗಾರಿಕೆ ಸ್ಥಾಪನೆಯಿಂದ ಐಟಿಐ ಕಲಿತವರು, ವಿದ್ಯಾವಂತರಿಗೆ ಉದ್ಯೋಗ ಸಿಗುತ್ತದೆ. ಆದರೆ, ದುಡಿಯಲು ಹೆಚ್ಚಾಗಿ ವಲಸೆ ಹೋಗುವವರು ಅನಕ್ಷರಸ್ಥರು. ಆದ್ದರಿಂದ ನಿಮ್ಮ ಸಲಹೆಯನ್ನು ಪೂರ್ಣವಾಗಿ ಒಪ್ಪಲಾರೆ. ಆದರೆ, ಹೈನುಗಾರಿಕೆ ಇದೆಯಲ್ಲ; ಅದು ಅತ್ಯಂತ ಸೂಕ್ತವಾಗಿದೆ. ಅದರ ಬಗ್ಗೆಯೇ ಮಾತನಾಡುವುದಿದೆ’ ಎಂದು ಕಾಳಜಿ ತೋರಿಸಿದರು. ನಾನು ಅವರ ಮಾತಿಗೆ ಕಿವಿಯಾದೆ.
‘ನೋಡಿ, ಹೈನುಗಾರಿಕೆಗೆ ಉತ್ತೇಜನ ನೀಡುವುದರಿಂದ ವಲಸೆ ಹೋಗುವವರ ಸಂಖ್ಯೆಯನ್ನು ಕಡಿಮೆ ಮಾಡಬಹುದು. ನಾನು ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಕಲಬುರ್ಗಿ–ಯಾದಗಿರಿ–ಬೀದರ್ ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ತುಂಬಾ ಕಡಿಮೆ ಇದೆ. ನಾವು ದೂರದ ಶಿವಮೊಗ್ಗ, ಪಕ್ಕದ ವಿಜಯಪುರದಿಂದ ಹಾಲು ತರಿಸಿಕೊಳ್ಳುತ್ತಿದ್ದೇವೆ. ನಮ್ಮದು ಎಂಥಾ ಸ್ಥಿತಿ’ ಎಂದು ಬೇಜಾರು ಮಾಡಿಕೊಂಡರು. ಈ ಸಂಗತಿಯನ್ನು ನಂಬಲು ಸಾಧ್ಯವಾಗಲೇ ಇಲ್ಲ. ಕಲಬುರ್ಗಿ–ಯಾದಗಿರಿ –ಬೀದರ್ ಹಾಲು ಒಕ್ಕೂಟದ ಅಧಿಕಾರಿಯನ್ನು ಮಾತನಾಡಿಸಿದೆ. ‘ಬೇಡಿಕೆ ಹೆಚ್ಚಿದೆ. ಆದರೆ, ಉತ್ಪಾದನೆ ಕಡಿಮೆ ಇದೆ. ಆದ್ದರಿಂದ ಹೊರಗಿನಿಂದ ಹಾಲು ತರಿಸಿಕೊಳ್ಳುತ್ತಿದ್ದೇವೆ’ ಎಂದು ಸಮರ್ಥಿಸಿಕೊಂಡರು.
ಬೇಡಿಕೆ ಇದ್ದರೂ ರೈತರು ಹಾಲು ಉತ್ಪಾದನೆ ಮಾಡಲು ಏಕೆ ಮುಂದೆ ಬರುತ್ತಿಲ್ಲ? ಎನ್ನುವ ಪ್ರಶ್ನೆ ನನ್ನಲ್ಲಿ ಜನ್ಮತಾಳಿತು. ಈ ಭಾಗದ ಜನರಿಗೆ ಹೈನುಗಾರಿಕೆ ಕುರಿತು ಹೆಚ್ಚಾಗಿ ಅರಿವು ಇಲ್ಲ. ಹಾಲು ಉತ್ಪಾದನೆಗಾಗಿ ರಾಸುಗಳನ್ನು ಸಾಕುವುದು ದೊಡ್ಡ ತಲೆನೋವಿನ ಕೆಲಸ ಎನ್ನುವ ಮನಸ್ಥಿತಿ ಇದೆ.
ಮಿಶ್ರತಳಿ ಹಸು, ಎಮ್ಮೆಗಳನ್ನು ಖರೀದಿಸಲು ದೊಡ್ಡ ಪ್ರಮಾಣದಲ್ಲಿ ಹಣಬೇಕು. ಅಷ್ಟೊಂದು ಹಣವನ್ನು ಯಾರು ಕೊಡುತ್ತಾರೆ? ಬ್ಯಾಂಕಿನವರು ಸಾಲ ಕೊಟ್ಟರೂ, ಜರ್ಸಿ, ಎಚ್.ಎಫ್ ತಳಿಯ ಹಸುಗಳನ್ನು ಖರೀದಿಸಿದರೂ, ಅವುಗಳನ್ನು ಸಾಕುವುದು ಹೇಗೆ? ಬೇಸಿಗೆಯಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುತ್ತದೆ. ಆಗ ಅವುಗಳನ್ನು ನಿಭಾಯಿಸುವುದು ಹೇಗೆ? ಅವುಗಳಿಗೆ ರೋಗ ಬಂದರೆ ತಿಳಿಯುವುದು ಹೇಗೆ? ನಮ್ಮದು ಒಣಭೂಮಿ, ಹಸಿರುಹುಲ್ಲು ಸಿಗುವುದೇ ಕಷ್ಟ. ಹಸು, ಎಮ್ಮೆ ಸಾಕುವುದರಿಂದ ವರ್ಷಪೂರ್ತಿ ಆದಾಯ ಬರುವುದಿಲ್ಲ.
ಒಂದುವೇಳೆ ಇವೆಲ್ಲವನ್ನೂ ನಿವಾರಿಸಿಕೊಂಡು ಹಾಲು ಉತ್ಪಾದಿಸಲು ಮುಂದಾದರೆ, ಖರೀದಿಸುವವರು ಯಾರು?–ಹೀಗೆ ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎನ್ನುವಂತೆ ಮಾತನಾಡುತ್ತಾರೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಇಲ್ಲಿಗಿಂತ ನೀರಿನ ಲಭ್ಯತೆ ತುಂಬಾ ಕಡಿಮೆ ಇದೆ. 1200 ರಿಂದ 1500 ಅಡಿಗಳಷ್ಟು ಬಾವಿ ಕೊರೆಸಿದರೆ ಅಲ್ಪಸ್ವಲ್ಪ ನೀರು ಸಿಗುತ್ತದೆ. ಆದರೂ, ಹೈನುಗಾರಿಕೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದೆ. ದಿನಕ್ಕೆ 9 ಲಕ್ಷ ಲೀಟರ್ಗಳಷ್ಟು ಹಾಲನ್ನು ಉತ್ಪಾದಿಸುತ್ತಿದೆ.
ಕೋಲಾರಕ್ಕಿಂತ ಭಿನ್ನವಾದ ವಾತಾವರಣ ಹೊಂದಿರುವ ಬೀದರ್ ಜಿಲ್ಲೆಯು ಹೆಚ್ಚು ತೆರೆದ ಬಾವಿಗಳನ್ನು ಹೊಂದಿದೆ. ನೀರಾವರಿ ಯೋಜನೆಗಳಿಗೆ ಕೊರತೆ ಇಲ್ಲ. 300 ರಿಂದ 400 ಅಡಿಗಳಷ್ಟು ಬಾವಿ ಕೊರೆದರೂ ನೀರು ಚಿಮ್ಮುತ್ತದೆ. ಇಷ್ಟೆಲ್ಲ ಅನುಕೂಲಗಳು ಇದ್ದರೂ ಜಿಲ್ಲೆಯಲ್ಲಿ ಪ್ರತಿದಿನ ಉತ್ಪಾದನೆ ಆಗುವುದು ಒಂದು ಲಕ್ಷ ಲೀಟರ್ ಹಾಲು ಮಾತ್ರ! ಇದರಲ್ಲಿ ಕಲಬುರ್ಗಿ ಹಾಲು ಒಕ್ಕೂಟಕ್ಕೆ ಬರುವುದು ಕೇವಲ 35 ಸಾವಿರ ಲೀಟರ್ಗಳು!
ಕಲಬುರ್ಗಿ ಜಿಲ್ಲೆಯ ಅಫಜಲಪುರ, ಆಳಂದ ತಾಲ್ಲೂಕುಗಳಲ್ಲಿ ಒಟ್ಟು 19 ಬ್ಯಾರೇಜುಗಳಿವೆ. ಜೇವರ್ಗಿ, ಯಾದಗಿರಿ, ಸುರಪುರ, ಶಹಾಪುರದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯಿಂದಾಗಿ ರೈತರು ಭತ್ತ, ಕಬ್ಬು ಬೆಳೆಯುತ್ತಿದ್ದಾರೆ. ಹೀಗಿದ್ದರೂ ಇವರೆಡೂ ಜಿಲ್ಲೆಗಳಿಂದ ಒಕ್ಕೂಟಕ್ಕೆ ಕೇವಲ 20 ಸಾವಿರ ಲೀಟರ್ ಹಾಲು ಮಾತ್ರ ಬರುತ್ತಿದೆ!
ಇಂತಹ ಅವಕಾಶವನ್ನು ಖಾಸಗಿಯವರು ಸೊಗಸಾಗಿ ಬಳಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳ ಖಾಸಗಿ ಡೇರಿಯವರು ನಿತ್ಯ ಸಾವಿರಾರು ಲೀಟರ್ಗಳಷ್ಟು ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವು ಭಾಗದಲ್ಲಿ ಖರೀದಿಯನ್ನೂ ಸಹ ಮಾಡುತ್ತಿದ್ದಾರೆ. ಆದರೂ ಹಾಲು ಒಕ್ಕೂಟದವರು ಹಾಲು ಉತ್ಪಾದನೆ ಹೆಚ್ಚಿಸಲು ದಿಟ್ಟ ಕ್ರಮ ಕೈಗೊಳ್ಳುತ್ತಿಲ್ಲ. ಈ ಜಿಲ್ಲೆಗಳಲ್ಲಿ ಹೈನುಗಾರಿಕೆ ಕುರಿತು ಅತೀವ ಕಾಳಜಿ ಹೊಂದಿರುವವರು ಪದೇ ಪದೇ ‘ಕೋಲಾರ ಜಿಲ್ಲೆ ಮಾದರಿ’ಯ ಮಂತ್ರವನ್ನು ಜಪಿಸುತ್ತಲೇ ಇರುತ್ತಾರೆ. ‘ಅವರಿಗೆ ಸಾಧ್ಯವಾಗಿದ್ದು ನಮ್ಮ ಭಾಗದ ರೈತರಿಗೆ ಏಕೆ ಸಾಧ್ಯವಾಗುವುದಿಲ್ಲ’ ಎಂದು ನೊಂದುಕೊಳ್ಳುತ್ತಿದ್ದಾರೆ.
ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳು ಹೈನುಗಾರಿಕೆಯಲ್ಲಿ ತುಂಬಾ ಹಿಂದೆ ಉಳಿದಿವೆ. ಇದಕ್ಕೆ ಕಾರಣ: ರೈತರಲ್ಲಿ ಜಾಗೃತಿ ಕೊರತೆ. ಹೈನುಗಾರಿಕೆ ಉಪ ಕಸುಬಿಗೆ ಹೇಳಿ ಮಾಡಿಸಿದ್ದು, ಇದರಿಂದಲೇ ಐದಾರು ಮಂದಿ ಇರುವ ಕುಟುಂಬವೊಂದು ನೆಮ್ಮದಿಯಿಂದ ಬದುಕಬಹುದು. ಇದನ್ನೇ ಉದ್ಯಮವನ್ನಾಗಿ ಮಾಡಿಕೊಂಡರೆ ಆರ್ಥಿಕ ಸ್ಥಿತಿಯನ್ನು ಎತ್ತರಿಸಿಕೊಳ್ಳಬಹುದು ಎನ್ನುವುದೇ ಹೆಚ್ಚಿನವರಿಗೆ ತಿಳಿದಿಲ್ಲ.
ಹಸು, ಎಮ್ಮೆಗಳನ್ನು ಕಟ್ಟುವುದು, ಸಗಣಿ, ಗಂಜಲ ಬಾಚುವುದು, ಕೊಟ್ಟಿಗೆ ಸ್ವಚ್ಛಗೊಳಿಸುವುದು, ರಾಸುಗಳ ಪೋಷಣೆ ಮಾಡುವುದು, ಮುಂಜಾನೆ, ಸಂಜೆ ಹಾಲು ಹಿಂಡುವುದು ಯಾರಿಗೂ ಬೇಡವಾಗಿದೆ. ಹೆಂಗಸರು ಟಿವಿಯಲ್ಲಿ ಸೀರಿಯಲ್ಗಳನ್ನು ನೋಡುವುದನ್ನು, ಗಂಡಸರು ಚಹಾದಂಗಡಿ ಮುಂದಿನ ಹರಟೆಯನ್ನು ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ! ಆದ್ದರಿಂದಲೇ ಎರಡೋ, ಮೂರೋ ದೇಸಿ ಹಸು ಇಲ್ಲವೆ ಎಮ್ಮೆಗಳನ್ನು ಸಾಕುತ್ತಾರೆ. ಅವುಗಳನ್ನು ಮೇಯಲು ಬಯಲಿಗೆ ಬಿಟ್ಟುಬಿಡುತ್ತಾರೆ. ಸಂಜೆ ಅವು ಮನೆ ಮುಂದೆ ಬಂದಾಗ ಕೆಚ್ಚಲಿಗೆ ನೀರು ಚಿಮ್ಮಿಸಿ, ಕೊಟ್ಟಷ್ಟು ಹಾಲು ಕರೆದು ತೃಪ್ತಿಪಡುತ್ತಾರೆ.
ಇನ್ನು, ಜನಪ್ರತಿನಿಧಿಗಳ ಪ್ರಕಾರ, ಜನರ ಜೀವನ ಮಟ್ಟವನ್ನು ಹೆಚ್ಚಿಸುವುದು ಎಂದರೆ–ರಸ್ತೆ, ಕಟ್ಟಡಗಳನ್ನು ನಿರ್ಮಿಸುವುದೇ ಆಗಿದೆ. ರೈತರಲ್ಲಿ ಜಾಗೃತಿ ಮೂಡಿಸಿ, ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕಿರುವ ಹಾಲು ಒಕ್ಕೂಟ ಗಾಢ ನಿದ್ರೆಯಲ್ಲಿದೆ. ಬ್ಯಾಂಕುಗಳು ಸಾಲ ಕೊಡಲು ಹಿಂದುಮುಂದು ನೋಡುತ್ತಿವೆ. ರೈತರು ಹೈನುಗಾರಿಕೆಗೂ ತಮಗೂ ಆಗಿಬರುವುದಿಲ್ಲ ಎಂಬ ಮೌಢ್ಯದಲ್ಲಿದ್ದಾರೆ. ಪರಿಸ್ಥಿತಿ ಹೀಗಿದ್ದರೂ, ಈ ಮೂರು ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ಹೆಚ್ಚಿಸುವುದಾದರೂ ಹೇಗೆ? ಬಲ್ಲವರು ಹೇಳುತ್ತಾರೆ: ದೇಸಿ ಹಸು, ಎಮ್ಮೆಗಳ ಬದಲು ಮಿಶ್ರತಳಿ ಹಸು, ಎಮ್ಮೆಗಳನ್ನು ಸಾಕಬೇಕು. ಅವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಪಶುವೈದ್ಯರ ಸಲಹೆ–ಸೂಚನೆ ಪ್ರಕಾರವೇ ಪೋಷಣೆ ಮಾಡಬೇಕು. ಆಗ ಒಂದೇ ಹಸುವನ್ನು ಸಾಕಿದರೂ ಒಂದಿಷ್ಟು ದುಡ್ಡಿನ ಮುಖ ನೋಡಬಹುದು.
ಇಲ್ಲಿ ನಿಮಗೆ ಇಬ್ಬರನ್ನು ಪರಿಚಯಿಸುತ್ತಿದ್ದೇನೆ. ಇವರು ಸಿದ್ದರಾಮ ನಾಗಶೆಟ್ಟಿ. ಬೀದರ್ ಸಮೀಪವಿರುವ ಚಿಕ್ಕಪೇಟೆಯವರು. ಕಲಿತಿರುವುದು ಐಟಿಐ. ಸರ್ಕಾರಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದರು. ಉದ್ಯೋಗ ಸಿಗಲಿಲ್ಲ. ವಾಹನ ಚಾಲನೆ ಗೊತ್ತಿದ್ದರಿಂದ ಕೆಲ ಕಾಲ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರಾಗಿ ಕೆಲಸ ಮಾಡಿದರು. ಅವಧಿ ಮುಗಿಯಿತು. ಬೆಂಗಳೂರು ಬಿಟ್ಟು ಊರಿಗೆ ಮರಳಿದರು. ಬೀದರ್ ಡೇರಿ ಬಳಿ ಇವರಿಗೆ ಐದು ಎಕರೆ ಜಮೀನು ಇದೆ. ಅಲ್ಲಿ ಮೂರು ವರ್ಷಗಳ ಹಿಂದೆ ಹೈನುಗಾರಿಕೆ ಶುರು ಮಾಡಿದರು. ಈಗ ಇವರ ಬಳಿ 10 ಎಮ್ಮೆ, ಎರಡು ಹಸುಗಳು ಇವೆ. ಅವುಗಳಿಂದ ದಿನಕ್ಕೆ ಸರಾಸರಿ 130 ಲೀಟರ್ ಹಾಲು ಕರೆಯುತ್ತಿದ್ದಾರೆ.
ನಾಗುರಾವ್ ಅಗವಾಲೆ ಅವರು ಬೀದರ್ ಜಿಲ್ಲೆ ಕಮಲನಗರ ಸಮೀಪದ ಚಾಂಡೇಶ್ವರ ಗ್ರಾಮದ ರೈತ. ಎಂಟು ವರ್ಷಗಳ ಹಿಂದೆ 50 ಸಾವಿರ ರೂಪಾಯಿಗಳಿಗೆ ಎರಡು ಜರ್ಸಿ ಹಸುಗಳನ್ನು ಖರೀದಿಸಿದರು. ಅವುಗಳ ಹಾಲನ್ನು ಹಿಂಡಿ ಎರಡು ಕೊಡಗಳಲ್ಲಿ ತುಂಬಿಕೊಂಡು ತಮ್ಮೂರಿನಿಂದ ಕಮಲನಗರಕ್ಕೆ ಕಾಲ್ನಡಿಗೆಯಲ್ಲಿ ಬಂದು ಮಾರಾಟ ಮಾಡುತ್ತಿದ್ದರು. ಈಗ ಇವರ ಬಳಿ ವಿವಿಧ ತಳಿಯ 20 ಕ್ಕೂ ಹೆಚ್ಚು ಹಸು, ಎಮ್ಮೆಗಳು ಇವೆ. ಪ್ರತಿನಿತ್ಯ ಸುಮಾರು 100 ಲೀಟರ್ ಹಾಲು ಕರೆಯುತ್ತಾರೆ. ಹಾಲು ಸಾಗಿಸಲು ಸ್ವಂತವಾಗಿ ಟೆಂಪೊ ಖರೀದಿಸಿದ್ದಾರೆ!
ಕ್ಷೀರಕ್ರಾಂತಿಯ ಪಿತಾಮಹ ಡಾ.ವರ್ಗಿಸ್ ಕುರಿಯನ್ 1983 ರಲ್ಲಿ ಬೀದರ್ಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಹೈನುಗಾರಿಕೆಗೆ ಇರುವ ಸಮೃದ್ಧ ಅವಕಾಶಗಳನ್ನು ಕಂಡವರು–‘ಇಲ್ಲಿನ ಜನರು ಹೈನುಗಾರಿಕೆಗೆ ಮುಂದಾದರೆ ಸಾಕು, ಹಾಲನ್ನು ಕ್ಯಾನುಗಳ ಬದಲು ಪೈಪ್ಲೈನ್ ಮೂಲಕ ಪೂರೈಕೆ ಮಾಡಬಹುದು’ ಎಂದು ಭವಿಷ್ಯ ನುಡಿದಿದ್ದರು. ಅವರ ಮಾತನ್ನು ಸಿದ್ದರಾಮ ನಾಗಶೆಟ್ಟಿ ಹಾಗೂ ನಾಗುರಾವ್ ಅಗವಾಲೆ ಸತ್ಯವಾಗಿಸುತ್ತಿದ್ದಾರೆ. ಇನ್ನು ನೀವು ಮನಸ್ಸು ಮಾಡಬೇಕು ಅಷ್ಟೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.