‘ಪೆಟ್ರೋಲ್ ರೇಟು ಇವತ್ತು ಎಷ್ಟು ಹೆಚ್ಚಾಗಿದೆ?’ ಬಂಕ್ನವನಿಗೆ ಶಂಕ್ರಿ ಕೇಳಿದ.
‘ಜಾಸ್ತಿಯಿಲ್ಲಾ ಸಾರ್, ಎರಡೇ ರೂಪಾಯಿ ಹೆಚ್ಚಾಗಿದೆ’ ಎಂದ.
‘ದಿನಾ ನಿಮ್ಮ ಬಂಕಿನಲ್ಲೇ ಪೆಟ್ರೋಲ್ ಹಾಕಿಸಿಕೊಳ್ತೀವಿ, ನಮಗೆ ಡಿಸ್ಕೌಂಟ್ ಕೊಡಿ’ ಸುಮಿ ಕೇಳಿಕೊಂಡಳು.
‘ಚೌಕಾಸಿ ಮಾಡಲು ಇದೇನು ತರಕಾರಿ ಅಂಗಡಿನಾ ಮೇಡಂ?...’ ಬಂಕಿನವ ನಕ್ಕ.
‘ಗಾಳಿ, ನೀರು, ಪೆಟ್ರೋಲ್ ಇಲ್ಲದೆ ಮನುಷ್ಯರು ಬದುಕಲಾಗೊಲ್ಲ...’ ಅಂದ ಶಂಕ್ರಿ.
‘ಗಾಳಿ, ನೀರು, ಪೆಟ್ರೋಲ್ ಪ್ರಕೃತಿಯ ಕೊಡುಗೆ ಕಣ್ರೀ, ಬಾವಿ ತೋಡಿದರೆ ಪೆಟ್ರೋಲ್ ಸಿಗುತ್ತೆ, ಅದಕ್ಕೆ ಇಷ್ಟೊಂದು ರೇಟಾ?’ ಎಂದಳು ಸುಮಿ.
‘ನೀವೂ ಬಾವಿ ತೋಡಿ ಪೆಟ್ರೋಲ್ ತೆಗೆದು ಬಳಸಿಕೊಳ್ಳಿ, ಯಾರು ಬೇಡಾಂತಾರೆ?’
‘ನಮ್ಮ ಜಾಗದಲ್ಲಿ ಬಾವಿ ತೋಡಿದರೆ ನೀರು ಸಿಗೋದೂ ಕಷ್ಟ’ ಅಂದ ಶಂಕ್ರಿ.
‘ಶ್ರೀಲಂಕಾದಲ್ಲಿ ದುಡ್ಡು ಕೊಟ್ರೂ ಪೆಟ್ರೋಲ್ ಸಿಗ್ತಿಲ್ಲವಂತೆ. ಭಗವಂತನ ಕೃಪೆಯಿಂದ ನಮ್ಮಲ್ಲಿ ಸಿಗ್ತಿದೆ. ಪೆಟ್ರೋಲನ್ನು ದೇವರ ಪ್ರಸಾದ ಅಂದುಕೊಳ್ಳಿ ಸಾರ್’ ಬಂಕಿನವ ಬುದ್ಧಿ ಹೇಳಿದ.
‘ನಮ್ಮ ಬದುಕಿನ ಬಂಡಿ ಚಲಿಸಬೇಕೆಂದರೆ ಬೈಕಿಗೆ ಪೆಟ್ರೋಲ್ ಹಾಕಿಸಲೇಬೇಕು’.
‘ಹೌದು, ನೀವು ಪೆಟ್ರೋಲಿಗೆ ಕೊಡುವ ಹೆಚ್ಚುವರಿ ಹಣದಿಂದ ನಮ್ಮ ಸರ್ಕಾರವೂ ನಡೆಯಬೇಕು. ಸಂಸಾರ, ಸರ್ಕಾರ ಎರಡೂ ಪೆಟ್ರೋಲನ್ನು ಅವಲಂಬಿಸಿವೆ ಅನಿಸೋದಿಲ್ವೇ? ಇಂತಹ ಪವಿತ್ರ ಪೆಟ್ರೋಲಿಗೆ ಬೆಲೆ ಕಟ್ಟಬಾರದು ಅಲ್ವಾ ಸಾರ್?’ ಅಂದ.