ಬೆಂಗಳೂರಿನ ಜನರು ಮತ್ತೊಮ್ಮೆ ಕಸ ಸಮಸ್ಯೆ ಎದುರಿಸುವಂತಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕಸದ ಕಗ್ಗಂಟು ಎದುರಾಗುತ್ತಿರುವುದು ಇದು ಮೂರನೇ ಬಾರಿ. ಮಂಡೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ಸುರಿಯಲು ಗ್ರಾಮಸ್ಥರು ಬಿಡುತ್ತಿಲ್ಲ.
ಜೂನ್ 1ರೊಳಗೆ ಕಸ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಮಂಡೂರು ಗ್ರಾಮಸ್ಥರಿಗೆ ಮಾತುಕೊಟ್ಟಿದ್ದ ಸರ್ಕಾರ ಮಾತು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಮತ್ತೊಂದಿಷ್ಟು ತಿಂಗಳು ಕಾಲಾವಕಾಶಬೇಕು ಎಂದು ಹೇಳುತ್ತಿದೆ. ಆದರೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಈ ನಾಟಕವಾಡಲಾಗುತ್ತಿದೆಯೇ ಹೊರತು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಪ್ರತಿದಿನ 4000 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಈ ಪೈಕಿ ಪ್ರತಿ ದಿನ ಮಂಡೂರು ಘಟಕಕ್ಕೆ ಸುಮಾರು 1500ರಿಂದ 1800 ಟನ್ ಕಸ ವಿಲೇವಾರಿಯಾಗುತ್ತದೆ. ಈಗ ಇಷ್ಟು ಪ್ರಮಾಣದ ಕಸ ಸುರಿಯಲು ಪರ್ಯಾಯ ವ್ಯವಸ್ಥೆ ಇಲ್ಲ. ಮಳೆಗಾಲ ಬೇರೆ ಬರುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ. ಪರಿಸ್ಥಿತಿ ಈ ಮಟ್ಟಕ್ಕೆ ಹೋಗಲು ಸರ್ಕಾರದ ನಿಷ್ಕ್ರಿಯತೆಯೇ ಕಾರಣ.
ಬೆಂಗಳೂರಿನಲ್ಲಿ ಕಸ ನಿರ್ವಹಣೆ ಎಂಬುದು ₨ 400 ಕೋಟಿ ಚಿನ್ನದ ಮೊಟ್ಟೆ ಇಡುವ ವ್ಯವಹಾರ. ಕಸ ಸಾಗಣೆ ವಿಚಾರದಲ್ಲಿ ಗುತ್ತಿಗೆದಾರರು ಹಾಗೂ ರಾಜಕಾರಣಿಗಳ ಅಪವಿತ್ರ ಮೈತ್ರಿ ಬಲವಾಗಿದೆ. ಆದರೆ ಇದನ್ನು ಬಗ್ಗುಬಡಿಯಲಾಗದಿರುವುದು ಆಡಳಿತದ ವೈಫಲ್ಯ. ಈ ಸಮಸ್ಯೆಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಮುಖ್ಯಮಂತ್ರಿಗಳು ದೂರಿದ್ದಾರೆ. ಸಮಸ್ಯೆಗೆ ಹೀಗೆ ರಾಜಕೀಯ ಬಣ್ಣ ನೀಡುತ್ತಾ ತನ್ನ ನಿಷ್ಕ್ರಿಯತೆಗೆ ನೆಪ ಹೇಳುವುದು ಜವಾಬ್ದಾರಿಯುತ ಸರ್ಕಾರದ ಲಕ್ಷಣವಲ್ಲ.
ಮೂಲದಲ್ಲೇ ಕಸ ವಿಂಗಡಣೆ ಹಾಗೂ ಸಂಸ್ಕರಣೆಗೆ ಬಿಬಿಎಂಪಿ ಮುಂದಾಗದಿರುವುದು ಕಸ ನಿರ್ವಹಣೆಯ ಸಮಸ್ಯೆಯನ್ನು ಜಟಿಲವಾಗಿಸುತ್ತದೆ. ಕಸ ವಿಂಗಡಣೆ ಮಾಡದವರಿಗೆ ದಂಡ ವಿಧಿಸಬೇಕು ಎಂಬ ಹೈಕೋರ್ಟ್ ನಿರ್ದೇಶನವೂ ಪಾಲನೆಯಾಗಿಲ್ಲ. ಮನೆಗಳಲ್ಲಿ ಹಸಿ ಹಾಗೂ ಒಣ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹಿಸಿ ನೀಡಿದರೂ ಕಸ ಸಂಗ್ರಹಿಸುವ ವಾಹನದಲ್ಲಿ ಒಟ್ಟಿಗೇ ಸುರಿಯುತ್ತಿರುವುದು ಅಕ್ಷಮ್ಯ. ತ್ಯಾಜ್ಯ ಸಂಗ್ರಹಿಸುವ ಕಾರ್ಮಿಕರಿಗೆ ತರಬೇತಿ ನೀಡುವಲ್ಲಿ ಮುತುವರ್ಜಿ ವಹಿಸದಿರುವುದು ಎದ್ದು ಕಾಣಿಸುತ್ತದೆ. ಒಟ್ಟಾರೆ ಕಸ ನಿರ್ವಹಣೆಯಲ್ಲಿ ಉಡಾಫೆತನ ಢಾಳಾಗಿ ಪ್ರದರ್ಶಿತವಾಗುತ್ತಿದೆ.
ಸೇಲಂನಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಬಂದಿದ್ದ ಸಚಿವ ಹಾಗೂ ಮೇಯರ್ ನೇತೃತ್ವದ ಬಿಬಿಎಂಪಿ ತಂಡ ಕಸ ನಿರ್ವಹಣೆಗೆ ವೈಜ್ಞಾನಿಕವಾದ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮಾತುಗಳನ್ನಾಡಿತ್ತು. ಆದರೆ ಈಗ ಮತ್ತೊಮ್ಮೆ ವಿಲೇವಾರಿಯಾಗದ ಕಸದ ರಾಶಿಯ ಕುರೂಪ ದರ್ಶನಕ್ಕೆ ನಗರ ಸಾಕ್ಷಿಯಾಗಬೇಕಾದ ಭೀತಿ ತಲೆದೋರಿದೆ.
ಕಸ ನಿರ್ವಹಣೆ ಬಿಬಿಎಂಪಿಯ ಜವಾಬ್ದಾರಿ. ಆದರೆ ಕಸ ಹಾಕಲು ಜಮೀನು ಹಾಗೂ ಸಂಸ್ಕರಣೆಗೆ ಅಗತ್ಯ ನೆರವು ನೀಡುವ ವಿಚಾರದಲ್ಲಿ ಸರ್ಕಾರದ ಜವಾಬ್ದಾರಿಯೂ ಇದೆ. ಪರಿಸ್ಥಿತಿ ಈ ಮಟ್ಟಕ್ಕೆ ಹೋಗುವವರೆಗೆ ಸರ್ಕಾರ ವಿಳಂಬ ನೀತಿ ತೋರಿರುವುದು ಸರಿಯಲ್ಲ. ಪರಿಸ್ಥಿತಿ ಇನ್ನೂ ಕೈಮೀರುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಲಿ. ವಿಲೇವಾರಿಯಾಗದ ಕಸದಿಂದಾಗಿ ಮತ್ತೊಮ್ಮೆ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನ ವರ್ಚಸ್ಸಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾನಿಯಾಗುವುದು ಬೇಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.