ಇಂದಿರಾ ಪದಚ್ಯುತಿಗೆ ಅವಿಶ್ರಾಂತ ಹೋರಾಟ: ಎಸ್ಸೆನ್ ದೃಢ ಸಂಕಲ್ಪ ಬೆಂಗಳೂರು, ಜ. 20– ‘ಶ್ರೀಮತಿ ಇಂದಿರಾ ಗಾಂಧಿಯವರನ್ನು ಪ್ರಧಾನಿ ಪಟ್ಟದಿಂದ ಇಳಿಸುವವರೆಗೆ ವಿಶ್ರಮಿಸುವುದಿಲ್ಲ ಎಂಬುದೇ ನನ್ನ ಸಂಕಲ್ಪ’ ಎಂದು ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
ಚಿಕ್ಕಪೇಟೆಯಲ್ಲಿ ಕಾಂಗ್ರೆಸ್ ಸದಸ್ಯರನ್ನು ಒಟ್ಟುಗೂಡಿಸುವ ಚಳವಳಿಯನ್ನು ಉದ್ಘಾಟಿಸಿದ ಶ್ರೀ ನಿಜಲಿಂಗಪ್ಪನವರು, ‘ನಾನು ಕಾಂಗ್ರೆಸ್ ಅಧ್ಯಕ್ಷ ಪಟ್ಟದಿಂದ ಇಳಿದು ನನ್ನ ಉಳಿದ ಜೀವಮಾನವನ್ನು ವಿಶ್ರಾಂತಿಯಲ್ಲಿ ಕಳೆಯಬೇಕೆಂದಿದ್ದೆ. ಆದರೆ ನನ್ನನ್ನು ತೆಗೆದುಹಾಕುವ ಶ್ರೀಮತಿ ಗಾಂಧಿ ಅವರ ಆಸೆ ಅರಿವಾದೊಡನೆಯೇ ಯಾವ ಪ್ರಸಂಗದಲ್ಲೂ ಆಕೆಯ ಅಭೀಷ್ಟೆ ನೆರವೇರದಂತೆ ಮಾಡುವ ನಿರ್ಧಾರ ಕೈಗೊಂಡೆ’ ಎಂದು ವಿವರಿಸಿದರು.
ಶ್ರೀಮತಿ ಗಾಂಧಿ ಅವರು ಸರ್ವಾಧಿಕಾರಿಯಾಗಲು ತಮ್ಮ ಬಲವೃದ್ಧಿಗೆ ಹಾಕಿಕೊಂಡಿರುವ ಸನ್ನಾಹವನ್ನು ಮುರಿಯುವುದಾಗಿ ತಾವು ಅವರಿಗೆ ತಿಳಿಸಿರುವುದಾಗಿ ಹೇಳಿದರು.
ಚಿಂತಾಮಣಿ ಗೋಲಿಬಾರ್: ನಿಲುವಳಿ ಸೂಚನೆಗೆ ಯತ್ನ, ಸಭಾತ್ಯಾಗ ಬೆಂಗಳೂರು, ಜ. 20– ಚಿಂತಾಮಣಿಯಲ್ಲಿ ಇತ್ತೀಚೆಗೆ ನಡೆದ ಗೋಲಿಬಾರ್ ಬಗ್ಗೆ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಲು ಯತ್ನಿಸಿ ವಿಫಲರಾದ ವಿರೋಧ ಪಕ್ಷದ ಸದಸ್ಯರು ಸಾಮೂಹಿಕವಾಗಿ ಸಭಾತ್ಯಾಗ ಮಾಡಿದರು.