ಪ್ರಧಾನಿಯಿಂದ ಶೀಘ್ರವೇ ಗಡಿ ಬಿಕ್ಕಟ್ಟು ಬಗ್ಗೆ ಪರಿಹಾರ ಸೂತ್ರದ ಪ್ರಕಟಣೆ
ಮುಂಬೈ, ಆ. 16– ಮಹಾರಾಷ್ಟ್ರ ಮತ್ತು ಮೈಸೂರು ಗಡಿ ಬಿಕ್ಕಟ್ಟನ್ನು ಬಿಡಿಸಲು ಅನುಸರಿಸುವ ಪರಿಹಾರ ವಿಧಾನದ ಕುರಿತು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಶೀಘ್ರದಲ್ಲೇ ಪ್ರಕಟಣೆ ಹೊರಡಿಸುವರೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ವಿ.ಪಿ.ನಾಯಕ್ ಅವರು ಶನಿವಾರ ತಿಳಿಸಿದರು.
ಅವರು ಇಲ್ಲಿ ಸ್ವಾತಂತ್ರ್ಯೋತ್ಸವದ ನಂತರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದರು.
ಔಷಧಿ ಬೆಲೆ ಇಳಿಸಲು ಇಂದು ಆಜ್ಞೆ
ನವದೆಹಲಿ, ಆ.16– ಸಾಮಾನ್ಯವಾಗಿ ಎಲ್ಲರೂ ಬಳಸುವ ಅನೇಕ ಔಷಧಿಗಳ ಬೆಲೆಗಳನ್ನು ಇಳಿಸಲು ವಿಶೇಷಾಜ್ಞೆಯೊಂದನ್ನು ಹೊರಡಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ವಿಧೇಯಕದಂತೆ ಸರ್ಕಾರ ಹೊಂದಿರುವ ವಿಶೇಷಾಧಿಕಾರದ ಈ ಹೊಸ ಆಜ್ಞೆಯನ್ನು ಸೋಮವಾರ ಘೋಷಿಸುವ ನಿರೀಕ್ಷೆ ಇದೆ. ಪೆಟ್ರೋಲಿಯಂ ಮತ್ತು ರಾಸಾಯನಿಕ ವಸ್ತುಗಳ ಸಚಿವ ಶಾಖೆಯು ಪಟ್ಟಿ ಮಾಡಿರುವಂತೆ, ಹೆಚ್ಚು ಬಳಕೆಯಲ್ಲಿರುವ ಸುಮಾರು 114 ಔಷಧಿಗಳು ಈ ಆಜ್ಞೆಯ ವ್ಯಾಪ್ತಿಗೆ ಸೇರುತ್ತವೆ.