l ಮಹಿಳೆಯರಿಗೆ ಯಾಕೆ ಸಮಾನತೆ ಬೇಡ?
ಸಮಾನತೆ ಬೇಡ ಎಂದು ನಾನು ಹೇಳಿಲ್ಲ. ಆದರೆ, ಕೆಲವು ವಿಚಾರಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನರು ಅಲ್ಲ. ಕೆಲವು ಹೆಣ್ಣು ಮಕ್ಕಳು ನಡುರಾತ್ರಿಯಲ್ಲಿ ಪಬ್ಗೆ ಹೋಗಿ ಕುಡಿದು ಬೀಳುತ್ತಾರೆ. ಅದನ್ನು ಪ್ರಶ್ನೆ ಮಾಡಿದ್ದೇನೆ ಅಷ್ಟೇ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ತಾಯಿ ಸ್ಥಾನ ನೀಡಲಾಗಿದೆ. ನಾವು ಪುರುಷರಿಗಿಂತ ಮೇಲ್ಪಟ್ಟವರು.
l ಮಹಿಳೆಯರು ಕುಡಿಯುವುದು ತಪ್ಪೇ?
ಮಹಿಳೆಯರು ಮದ್ಯಪಾನ ಮಾಡಬಾರದು ಎಂದು ನಾನು ಹೇಳಿಲ್ಲ. ಹಾಗೆಂದು, ಪುರುಷರ ರೀತಿಯಲ್ಲಿ ಕುಡಿದು ಹಾದಿ ಬೀದಿಯಲ್ಲಿ ಬಿದ್ದರೆ ಅದನ್ನು ಒಪ್ಪಲು ಸಾಧ್ಯವೇ? ಮಹಿಳೆಯರು ತಲ್ವಾರ್, ಪಿಸ್ತೂಲ್ಗಳನ್ನು ಹಿಡಿದು ಸುತ್ತಾಡುವುದು ಸರಿಯಲ್ಲ.
l ತ್ರಿವಳಿ ತಲಾಖ್ ವಿಚಾರದಲ್ಲಿ ನಿಮ್ಮ ಪಕ್ಷ ಸಮಾನತೆಯ ಮಾತನಾಡುತ್ತಿದೆ. ಆದರೆ, ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ಕೂಡದು ಎಂಬ ನಿಲುವು ನಿಮ್ಮ ಪಕ್ಷದ್ದು. ಇದು ದ್ವಂದ್ವ ಅಲ್ಲವೇ?
ಬದುಕಿನಲ್ಲಿ ಸಂಪ್ರದಾಯ ಇರಬೇಕು. ಆದರೆ, ಅದೇ ಬದುಕು ಅಲ್ಲ. ಬದುಕಿಗೆ ಮಾರಕ ಆಗಿರುವ ಸತಿ ಸಹಗಮನ ಪದ್ಧತಿ, ಬಾಲ್ಯ ವಿವಾಹದಂತಹ ಸಂಪ್ರದಾಯಗಳನ್ನು ರದ್ದುಪಡಿಸಲಾಗಿದೆ. ತ್ರಿವಳಿ ತಲಾಖ್, ಬದುಕಿಗೆ ಮಾರಕವಾದ ಸಂಪ್ರದಾಯ. ಇದರಲ್ಲಿ ಮುಸ್ಲಿಂ ಮಹಿಳೆಯರ ಬದುಕಿನ ಪ್ರಶ್ನೆ ಇದೆ. ಹೀಗಾಗಿ, ಇದನ್ನು ನಮ್ಮ ಪಕ್ಷ ವಿರೋಧಿಸುತ್ತಿದೆ.
ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಲೇಬಾರದು ಎಂದು ನಾವು ಹೇಳಿಲ್ಲ. ಸ್ವಾತಂತ್ರ್ಯ ಬೇರೆ, ಸ್ವೇಚ್ಛಾಚಾರ ಬೇರೆ. ಮುಟ್ಟಿನ ಸಮಯದಲ್ಲಿ ದೇವಳ ಪ್ರವೇಶ ಮಾಡುವುದು ಸರಿಯಲ್ಲ. ಈ ಪವಿತ್ರ ಸ್ಥಾನಕ್ಕೆ ಸಾವಿರಾರು ಜನರು ಬರುತ್ತಾರೆ. ಅನಾರೋಗ್ಯದ ಸಮಯದಲ್ಲಿ ದೇವಳ ಪ್ರವೇಶ ಮಾಡಿದರೆ ರೋಗ ಹರಡುವ ಸಾಧ್ಯತೆ ಇರುತ್ತದೆ. ಸಂಪ್ರ
ದಾಯವನ್ನು ಬುಡಮೇಲು ಮಾಡುವ ಉದ್ಧಟತನ ಒಪ್ಪಲಾಗದು. ಶಬರಿಮಲೆಗೆ ಮಹಿಳೆ ಹೋಗದಿದ್ದರೆ ಯಾವ ನಷ್ಟವೂ ಇಲ್ಲ.
l ನಿಮ್ಮ ಪಕ್ಷದಲ್ಲಿ ಮಹಿಳೆಯರನ್ನು ಸಮಾನವಾಗಿ ಕಂಡಿಲ್ಲವೇ?
ಇಡೀ ದೇಶದ ರಕ್ಷಣೆಯ ಹೊಣೆ ಹೊತ್ತಿರುವ ರಕ್ಷಣಾ ಖಾತೆಯನ್ನು ಮಹಿಳೆಗೆ ಕೊಟ್ಟಿದ್ದಾರೆ. ಮೊದಲ ಬಾರಿಗೆ ಸೇನೆಯಲ್ಲಿ ಮಹಿಳಾ ತುಕಡಿ ರಚನೆಯಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡಿರುವುದು ನಮ್ಮ ಪಕ್ಷ.
ಮಂಜುನಾಥ ಹೆಬ್ಬಾರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.