ಮೂರು ದಶಕದ ಒಳಮೀಸಲಾತಿ ಹೋರಾಟವು ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿನಿಂದ ನಿಟ್ಟುಸಿರು ಬಿಡುವಂತಾಗಿದೆ. ಸ್ವಾತಂತ್ರ್ಯದ ನಂತರ ಸಂವಿಧಾನದಲ್ಲಿ ಮೀಸಲಾತಿಯನ್ನು ಅಳವಡಿಸುವುದು ಶೋಷಿತ ಸಮುದಾಯವನ್ನು ಮೇಲೆತ್ತಲು ಸಹಾಯ ಮಾಡುತ್ತದೆ ಎಂಬ ಅಭಿಪ್ರಾಯವಿತ್ತು. ಆದರೆ, ಇದು ಶೋಷಿತ ಜಾತಿಗಳ ವಿಮೋಚನೆಗೆ ಸಂಪೂರ್ಣ ಪರಿಹಾರವಲ್ಲವೆಂದು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಅಂಬೇಡ್ಕರ್ ಭಾವಿಸಿದ್ದರು. ಮೀಸಲಾತಿಯಿಂದ ಎಲ್ಲ ಪರಿಶಿಷ್ಟ ಜಾತಿಗಳಿಗೆ ನ್ಯಾಯ ಸಿಗುವುದಿಲ್ಲವೆಂಬ ಅರಿವು ಅವರಿಗೆ ಇತ್ತು. ‘ವಿದ್ಯಾವಂತ ಪರಿಶಿಷ್ಟ ಜಾತಿಗಳವರು ಅನಕ್ಷರಸ್ಥ, ಹಳ್ಳಿವಾಸಿಗಳಾಗಿರುವ ಬಂಧುಗಳ ಬಗೆಗೆ ಕಾಳಜಿ ತೋರುತ್ತಿಲ್ಲವೆಂದು ಅಂಬೇಡ್ಕರ್ ದುಃಖಿತರಾದದ್ದೂ ಉಂಟು’. ಮೀಸಲಾತಿ ಕೆಲವೇ ಜನರ ಸ್ವತ್ತಾಗಬಾರದು, ಎಲ್ಲರ ವಿಮೋಚನೆಯ ಅಸ್ತ್ರವಾಗಬೇಕೆಂದು ಅವರು ಬಯಸಿದ್ದರು. ಬಹುಶಃ ಇದುವೇ ಒಳಮೀಸಲಾತಿ ಎಂಬ ಚಿಂತನೆಯಲ್ಲಿ ಟಿಸಿಲೊಡೆಯಿತು.