ಸೋಮವಾರಪೇಟೆ: ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಅಧ್ಯಕ್ಷೆ ಲತಾ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗದ್ದಲ, ಗಲಾಟೆ, ಹಲ್ಲೆ ಉಂಟಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಆಶ್ರಯ ಮನೆ ಯೋಜನೆಯಡಿ ಫಲಾನುಭವಿಗಳಿಂದ ಲಂಚ ಪಡೆದಿರುವ ಬಗ್ಗೆ, ಫಲಾನುಭವಿಗಳ ಆಯ್ಕೆಯಲ್ಲಿ ಅನ್ಯಾಯವಾಗಿದೆ ಎಂದು ಕೆಲವರು ಸಭೆ ಪ್ರಾರಂಭವಾದ ಕೂಡಲೇ ಕೂಗಾಟ ಪ್ರಾರಂಭಿಸಿದರು. ಇದು ಮಧ್ಯಾಹ್ನ 1.30ರವರೆಗೂ ಮುಂದುವರಿದಿತ್ತು. ಬೇರಾವುದೇ ವಿಷಯಗಳು ಚರ್ಚೆಯಾಗದೆ, ಸದಸ್ಯ ಮಜೀದ್ ಮೇಲೆ ಹಲ್ಲೆ ನಡೆಯುವುದರೊಂದಿಗೆ ಕೊನೆಯಾಗಿದೆ.
ಸಭೆಯಲ್ಲಿ ‘ನನ್ನನ್ನು ದೇಶದ್ರೋಹಿ’ ಎಂದು ದೂರಿದರು. ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಜೀದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದಸ್ಯರಾದ ಸೋಮಪ್ಪ ಹಾಗೂ ಪ್ರಸನ್ನ ಅವರು ಜಾತಿ ನಿಂದನೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕೆ.ಕೆ. ಭಾಸ್ಕರ್ ಸಾಹಿ, ದಯಾನಂದ, ಅಶೋಕ್, ಜಯಾರಾಂ, ಶ್ರೀ ವಿರುದ್ಧ ದೂರು ನೀಡಿದ್ದಾರೆ.