ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ: ಕವಿ ವಾಜಪೇಯಿ

Last Updated 16 ಆಗಸ್ಟ್ 2018, 15:40 IST
ಅಕ್ಷರ ಗಾತ್ರ

ಮೇ ಹದಿಮೂರರಂದು (2004ನೇ ಇಸವಿ) ಬೆಳಿಗ್ಗೆ ಲೋಕಸಭಾ ಚುನಾವಣೆಗಳ ಮತಗಳ ಎಣಿಕೆ ಪ್ರಾರಂಭಗವಾಗಬೇಕಾಗಿತ್ತು. ಹನ್ನೆರಡನೇ ತಾರೀಖು ರಾತ್ರಿ ಎನ್‌ಡಿಟಿವಿಯಲ್ಲಿ ರಾಜ್‌ದೀಪ್‌ ಸರ್‌ದೇಸಾಯಿ ಅಟಲ್‌ ಅವರನ್ನು ಸಂದರ್ಶಿಸಿದರು. ಅದೊಂದು ಅತ್ಯುತ್ತಮ ಸಂದರ್ಶನವಾಗಿತ್ತು. ರಾಜ್‌ದೀಪ್‌ ಘನತೆಯೇ ಮೈದಾಳಿದಂತೆ ಕುಳಿತಿದ್ದ ವಾಜಪೇಯಿಯವರನ್ನು ಅಷ್ಟೇ ಘನತೆಯಿಂದ ಪ್ರಶ್ನಿಸಿ ಉತ್ತರಗಳನ್ನು ಪಡೆದರು. ಅದು ಅಟಲ್‌ ಅವರು ಆತ್ಮಶೋಧನೆಯ ಆಳಕ್ಕಿಳಿಯಲೂ, ಮರ್ಮಾಘಾತ ಪ್ರಶ್ನೆಗಳಿಂದ ತಬ್ಬಿಬ್ಬಾಗುವಂತೆಯೂ ಇದ್ದ–ಇಷ್ಟೆಲ್ಲದರ ನಡುವೆ ಘನತೆಯ ಎಲ್ಲೆಯನ್ನು ಮೀರದ ಸಂದರ್ಶನವಾಗಿತ್ತದು.

ಪ್ರಧಾನಮಂತ್ರಿಯಾಗಿ ಕೊನೆಯ ಗಳಿಗೆಯ ಆ ಕ್ಷಣಗಳು ಆ ಸಂದರ್ಶನದಿಂದ ಬಹುಶಃ ಹೊಸ ಅರ್ಥ ಹೊಳೆಯಿಸಿರಬೇಕು ಅಟಲ್‌ ಅವರಿಗೆ. ಅವರು ಮೌನದ ಕಣಿವೆಗೆ ಇಳಿದರು. ಅಲ್ಲಿ ರಾಜಕಾರಣದ ಅನೇಕ ಪ್ರಶ್ನೆಗಳು ಇದ್ದವು. ಅವೆಲ್ಲವನ್ನುಬರೆಯುವುದು ನನ್ನ ಉದ್ದೇಶವಲ್ಲ. ರಾಜ್‌ದೀಪ್ ಪ್ರಾರಂಭದಲ್ಲೇ ಒಂದು ಪ್ರಶ್ನೆ ಕೇಳಿದರು. ಯೌವನದ ದಿನಗಳಲ್ಲಿ ಅಟಲ್‌ಗಿದ್ದ ಭವಿಷ್ಯದ ಆಸೆ ಯಾವುದು ಎಂಬ ಪ್ರಶ್ನೆ ಅದು. ಅಟಲ್ ತಾವೊಬ್ಬ ಕವಿಯಾಗುವ ಹಂಬಲವುಳ್ಳವನಾಗಿದ್ದೆ ಎಂದು ಉತ್ತರಿಸಿದರು. ಆ ಸಂದರ್ಶನದ ಮುಕ್ತಾಯ ಕೂಟ ಅಟಲ್‌ರ ಕಾವ್ಯ ಜೀವನದ ಬಗೆಗೇ ಇತ್ತು. ಅವರು ತಮ್ಮ ಕವಿತೆಯ ಸಾಲುಗಳನ್ನು ನೆನಪು ಮಾಡಿಕೊಂಡು ಮುಗಿಸಿದರು.

ಕನ್ನಡಕ್ಕೆ ಈಗಾಗಲೇ ಅವರ ಕಾವ್ಯವನ್ನು ಸರಜೂಕಾಟ್ಕರ್ ಅನುವಾದಿಸಿ ಪ್ರಕಟಿಸಿರುವುದು ಎಲ್ಲರಿಗೂ ತಿಳಿದಿದೆ. ಈಗ ಇನ್ನಷ್ಟು ಕವಿತೆಗಳು ಬಂದಿವೆ. ಈಗ ವರ್ಷದ ಹಿಂದೆ ಹಸ್ತಪ್ರತಿಯಲ್ಲಿ ಓದುವ ಅವಕಾಶ ನನಗೆ ಸಿಕ್ಕಿದುದು ತುಂಬಾ ಆಕಸ್ಮಿಕವಾಗಿತ್ತು. ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯ ಡಾ. ಕೆ ವೆಂಕಟಸುಬ್ರಮಣಿಯನ್ ಹಸ್ತಪ್ರತಿಯನ್ನು ಕಳುಹಿಸಿ ಅನುವಾದವನ್ನೊಮ್ಮೆ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೇಳಿದ್ದರು. ಕೆ.ಎಸ್ ರಮಾನಂದ ಅನುವಾದ ಮಾಡಿದ್ದಾರೆ.

ಅಟಲ್ ತಿಳಿಸುವಂತೆ ಅವರು ತಮ್ಮ ಸುತ್ತಲ ಜಗತ್ತನ್ನು ಕುರಿತು ತಮ್ಮ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಬೇಕಾದ ಶಕ್ತಿಯನ್ನು ಪಡೆಯಲು ಕಾವ್ಯ ರಚನೆ ಮಾಡುತ್ತಾರೆ. ಪಶ್ಚಾತ್ತಾಪ ಅಥವಾ ಸೋಲಿನ ದ್ಯೋತಕವಾಗದೆ ಆತ್ಮವಿಶ್ವಾಸ ಹಾಗೂ ಗೆಲುವನ್ನು ಬಯಸುವ ಅಭಿವ್ಯಕ್ತಿಗಾಗಿ ತಮ್ಮ ಕಾವ್ಯ ಮೈದಾಳುತ್ತದೆಂದು ಹೇಳುತ್ತಾರೆ.

ಅಟಲ್ ಅವರ ತಂದೆ ಪಂಡಿತ್ ಕೃಷ್ಣ ಬಿಹಾರಿ ವಾಜಪೇಯಿ ಗ್ವಾಲಿಯರ್‌ನ ಪ್ರಸಿದ್ಧ ಕವಿಯಾಗಿದ್ದರು. ಅಟಲ್‌ರ ಅಜ್ಜ ಪಂಡಿತ್ ಶ್ಯಾಮಲಾಲ್ ವಾಜಪೇಯಿ ಹಿಂದಿ ಹಾಗೂ ಸಂಸ್ಕೃತ ಸಾಹಿತ್ಯ ಪ್ರೇಮಿಯಾಗಿದ್ದರಂತೆ. ಅಟಲ್‌ರ ಅಣ್ಣ ಪಂಡಿತ್ ಅವಧ್ ಬಿಹಾರಿ ವಾಜಪೇಯಿ ಕೂಡ ಕವಿತೆಗಳನ್ನು ಬರೆದು ಕವಿ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದರಂತೆ.

ಕಾವ್ಯ ವಂಶ ಪಾರಂಪರ್ಯವಾಗಿ ಅಟಲ್‌ರಿಗೆ ದತ್ತವಾದದ್ದು. ರಾಜಕಾರಣಗಳಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿ ಕೆಳಗಿಳಿಯುವ ಗಳಿಗೆಯಲ್ಲೂ ಕಾವ್ಯದ ಬಗೆಗಿನ ತಮ್ಮ ಕಾಳಜಿಯನ್ನು ಪ್ರಕಟಿಸುವ ಅಟಲ್ ಕವಿ ಹೃದಯವುಳ್ಳವರೆಂದು ಧಾರಾಳವಾಗಿ ಹೇಳಬಹುದು. ಕವಿಯಾಗಿ ಅವರಿಗೆ ಹಿಂದಿ ಕಾವ್ಯ ಜಗತ್ತಿನಲ್ಲಿ ಎಂಥ ಸ್ಥಾನವಿದೆಯೆಂಬುದನ್ನು ಅಲ್ಲಿನ ವಿಮರ್ಶಕ ಪಂಡಿತರು ತಿಳಿಯಬೇಕಷ್ಟೆ. ಅವರು ಗದ್ಯ ಕೃತಿಗಳನ್ನು ಪ್ರಬಂಧಗಳನ್ನೂ ಬರೆದಿದ್ದರು. ಆದರೆ ಸಕ್ರಿಯ ರಾಜಕಾರಣ ಅವರ ಕಾವ್ಯ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿದೆ. ಅವರು ಬರೆಯಬೇಕಾದಷ್ಟು ಬರೆಯಲು ಸಾಧ್ಯವಾಗಿಲ್ಲ. ರಾಜಕಾರಣವನ್ನೂ ಅವರು ವಿಶೇಷವಾಗಿ ಇಷ್ಟಪಡುವರಾದ್ದರಿಂದ ಇದು ಸಹಜ, ‘ಎಷ್ಟು ಬರೆಯಬೇಕೆಂಬ ಆಸೆಯಿತ್ತೊ ಅಷ್ಟು ಬರೆಯಲಾಗಲಿಲ್ಲ. ಅದರ ಕೊರಗೇ ನನಗಿದೆ. ಆದರೆ ನನ್ನ ಒಳಗಿನ ಪ್ರಪಂಚದ ವಸ್ತುಸ್ಥಿತಿಯನ್ನು ಮರೆಮಾಚದೆ ಕವಿಗೆ ವಿಧೇಯನಾಗಿರಲು ಪ್ರಯತ್ನ ಪಟ್ಟಿದ್ದೇನೆ’ ಎನ್ನುತ್ತಾರೆ ವಾಜಪೇಯಿ.

ಕವಿಯ ಆಸೆ ಸುತ್ತಲ ಮನುಷ್ಯರ ಜೊತೆ ಬೆರೆತು ಒಂದಾಗುವುದು. ಅವರ ಜೊತೆಜೊತೆ ನಡೆಯುವುದು, ಅವರ ಗುಂಪಿನಲ್ಲಿ ಕಳೆದು ಹೋಗುವುದು, ಮುಳುಗಿ ಹೋಗುವುದು; ಅಂಥ ಪ್ರಕ್ರಿಯೆಯಲ್ಲಿ ತನ್ನನ್ನು ತಾನೇ ಮರೆತು ತನ್ನ ಅಸ್ತಿತ್ವಕ್ಕೆ ಹೊಸ ಅರ್ಥವನ್ನೂ ಬದುಕಿಗೆ ಸುಗಂಧವನ್ನೂ ತರುವಂಥ ಮಹತ್ವಾಕಾಂಕ್ಷೆಯನ್ನು ಅಟಲ್‌ ಪ್ರಕಟಿಸುತ್ತಾರೆ. ಅವರು ತಮ್ಮ ಪ್ರಭುವಿನಲ್ಲಿ ಪ್ರಾರ್ಥಿಸುವುದು ಹೀಗೆ;

ವಸಂತವೂ ಇರದ, ಶಿಶಿರವೂ ಬಾರದ
ಕೇವಲ ಎತ್ತರದ ಬಿರುಗಾಳಿಗಳ
ಏಕಾಂತದ ಶೂನ್ಯ
ನನ್ನ ಪ್ರಭೂ!
ನನಗೆಂದೂ ಕೊಡದಿರು ಇಂಥ ಎತ್ತರ
ನನ್ನವರ ಅಪ್ಪಿಕೊಳ್ಳಲಾಗದ
ದುಷ್ಟತೆಯ ನನಗೆಂದೆಂದೂ ಕೊಡದಿರು.

’ವಾಜಪೇಯಿ 31’ ಎಂಬ ಈ ಸಂಗ್ರಹದಲ್ಲಿ 31 ಕವಿತೆಗಳಿವೆ. ವೈಯಕ್ತಿಕ ಭಾವನೆಗಳನ್ನೇ ಸಣ್ಣ ಸಣ್ಣ ಪ್ರತಿಮೆಗಳ ಮೂಲಕ ಅಭಿವ್ಯಕ್ತಿಗೊಳಿಸುವ ಕವಿ ಅಟಲ್‌ ಸಮಕಾಲೀನ ವಸ್ತು–ಸಂಗತಿಗಳನ್ನು ತಮ್ಮ ಕಾವ್ಯದ್ರವ್ಯವನ್ನಾಗಿ ಮಾಡಿಕೊಂಡಿದ್ದಾರೆ. ಹರಿದ ತಂತಿಯಿಂದ ವಸಂತ ಸ್ವರ ಹರಿಸಿ, ಹೆಬ್ಬಂಡೆಯ ಎದೆಸೀಳಿ ಹೊಸ ಚಿಗುರನ್ನು ಮೊಳೆಯಿಸುವ, ಪೂರ್ವದಲ್ಲಿ ಅರುಣೋದಯ ರೇಖೆಯನ್ನು ಕಾಣುತ್ತಾ ಹೊಸ ಗೀತೆಯೊಂದನ್ನು ಹಾಡುವೆನು ಎನ್ನುವ ಕವಿ ಅಟಲ್‌ ಸೋಲೊಪ್ಪರಾಲೆ, ಹೊಸ ಗೀತೆಯ ಹಾಡುವೆ ಎನ್ನುತ್ತಾರೆ. ಮತ್ತೊಂದು ಕವಿತೆಯಲ್ಲಿ, ‘ನಾನು ಹಾಡುವುದಿಲ್ಲ’ ಎನ್ನುತ್ತಾರೆ.

‘ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ
ನಾನು ಹಾಡುವುದಿಲ್ಲ
.......
ಬಿಡುಗಡೆಯ ಗಳಿಗೆಯಲ್ಲಿ
ಬಂಧಿ ನಾನು ಮತ್ತೆ ಮತ್ತೆ
ನಾನು ಹಾಡುವುದಿಲ್ಲ’

–––

(ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ಅವರ ‘ಬಹುವಚನ’ (2005) ಪುಸ್ತಕದಲ್ಲಿ ಈ ಲೇಖನ ಪ್ರಕಟವಾಗಿದೆ)

ಇನ್ನಷ್ಟು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT