ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ ಅಂಕಣ: ಗಿಡ ನೆಡಲು ಇರಲಿ ವೈಜ್ಞಾನಿಕ ತಳಹದಿ

ಖಾಲಿ ಜಾಗ ಕಂಡಲ್ಲೆಲ್ಲಾ ಗಿಡ ನೆಡಲು ಹೋಗುವುದು ಅವಿವೇಕದ ನಡೆಯಾಗುತ್ತದೆ
Published 5 ಜೂನ್ 2023, 1:44 IST
Last Updated 5 ಜೂನ್ 2023, 1:44 IST
ಅಕ್ಷರ ಗಾತ್ರ

ನಾಗರಾಜ ಕೂವೆ

ಚಾರ್ಮಾಡಿ ಘಾಟಿಯ ಮೂಲಕ ಕೊಟ್ಟಿಗೆಹಾರದ ಕಡೆಗೆ ಒಮ್ಮೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಪ್ರಯಾಣದಲ್ಲಿ ಜೊತೆಯಾದ ವ್ಯಕ್ತಿಯೊಬ್ಬರೊಡನೆ ಪರಿಸರ, ಕೃಷಿಯ ಬಗೆಗೆ ಮಾತನಾಡುತ್ತಾ ಬರುತ್ತಿದ್ದೆ. ಘಟ್ಟ ಏರುತ್ತಿದ್ದಂತೆ, ದಾರಿಯಲ್ಲಿ  ಬೋಳುಗುಡ್ಡದಂತೆ ಕಾಣುವ ಶೋಲಾ ಹುಲ್ಲುಗಾವಲನ್ನು ನೋಡಿದ ಅವರು ‘ಇಲ್ಲಿನವರಿಗೆ ಬುದ್ಧಿ ಇಲ್ಲ ಕಣ್ರೀ. ಇಷ್ಟೊಂದು ಜಾಗ ಖಾಲಿ ಬಿಟ್ಟಿದ್ದಾರಲ್ಲ, ಇಲ್ಲೆಲ್ಲಾ ಗಿಡ ನೆಟ್ಟು ಹಸಿರು ಜಾಸ್ತಿ ಮಾಡಬೇಕು’ ಎಂದು ಹೇಳಿದರು. ಅವರ ಮಾತನ್ನು ಕೇಳಿ ನನಗೆ ದಿಗಿಲಾಯಿತು. ಆದರೆ ಇಂತಹ ಅಭಿಪ್ರಾಯವೇ ಸಮಾಜದ ಹೆಚ್ಚಿನ ಜನರಲ್ಲಿ ಇರುವುದು ದುರಂತ. ಪರಿಸರ ಸಂರಕ್ಷಣೆ ಎಂದರೆ ಮರ ಬೆಳೆಸುವುದು ಎಂಬ ಸೀಮಿತ ಪರಿಕಲ್ಪನೆ ನಮ್ಮಲ್ಲಿ ಇದೆ.

ಪರಿಸರ ನಾಶ ತಡೆಗೆ ಸುಲಭವಾದ ಪರಿಹಾರವೆಂದರೆ ಗಿಡ ನೆಡುವುದು ಎಂಬುದು ಹೆಚ್ಚಿನವರ ಅಭಿಪ್ರಾಯ. ನಿಸರ್ಗ ರಕ್ಷಣೆಗೆ ಸುಲಭವಾದ, ಆಕರ್ಷಕವಾದ ಮತ್ತು ಒಮ್ಮತದ ದೃಷ್ಟಿಕೋನವಿದು. ‘ಮರ ಕಡಿಯಬೇಡಿ’ ಎಂದಾಗ ಹುಟ್ಟಿಕೊಳ್ಳುವ ವಿವಾದ, ಅಭಿವೃದ್ಧಿ ವಿರೋಧಿ ಮತ್ತು ಪರಿಸರವ್ಯಾಧಿ ಎಂಬ ಹಣೆಪಟ್ಟಿ ಯಾವುದೂ ಗಿಡ ನೆಡುವ ಕಾರ್ಯಕ್ರಮಕ್ಕೆ ಅಡ್ಡಿಯಾಗುವುದಿಲ್ಲ. ಆದರೆ ಈ ಕೆಲಸ ಒಳ್ಳೆಯ ಆಶಯಗಳನ್ನು ಹೊಂದಿದ್ದರೂ ಅದು ತನ್ನದೇ ಆದ ಲೋಪದೋಷಗಳನ್ನೂ ಒಳಗೊಂಡಿದೆ.

ಹುಲ್ಲುಗಾವಲೆಂದು ಕರೆಯುವ ಈ ಬೋಳುಗುಡ್ಡಗಳು ಮತ್ತು ಎರಡು ಬೆಟ್ಟಗಳು ಸೇರುವ ಕಣಿವೆಯಲ್ಲಿರುವ ಶೋಲಾ ಕಾಡು ಇದ್ದಲ್ಲಿ ಮಾತ್ರ ನದಿ ಮೂಲಗಳು ಉಳಿಯುತ್ತವೆ. ಮಳೆಗಾಲದಲ್ಲಿ ಬೀಳುವ ಮಳೆಯ ನೀರನ್ನು ಈ ಬೋಳುಗುಡ್ಡಗಳು ಹಿಡಿದಿಟ್ಟುಕೊಂಡು, ಮಳೆ ಕಡಿಮೆಯಾದಂತೆ ಕೆಳಗಿನ ಕಾಡು ಮತ್ತು ತೊರೆಗಳಿಗೆ ಹರಿಸುತ್ತಾ ಅವು ನಿರಂತರ ಜೀವಂತವಾಗಿ ಇರುವಂತೆ ನೋಡಿಕೊಳ್ಳುತ್ತವೆ.

ಪರಿಸರ ಎಂದರೆ ಗಿಡ, ಮರ ಎಂಬ ಸೀಮಿತ ದೃಷ್ಟಿಕೋನ ಹೊಂದಿರುವ ನಾವು, ಹುಲ್ಲುಗಾವಲು ಮತ್ತು ಹೆಚ್ಚು ಮರಗಳಿಲ್ಲದ ಗುಡ್ಡಗಳಲ್ಲಿ ಏನೂ ಇಲ್ಲ ಎಂದುಕೊಂಡಿದ್ದೇವೆ. ಇಂತಹ ಪರಿಸರ ವ್ಯವಸ್ಥೆಯಲ್ಲಿ ಮಾತ್ರ ಬದುಕುವ ಸಸ್ಯಗಳು, ಕ್ರಿಮಿಕೀಟಗಳು, ಪಕ್ಷಿಗಳು, ಸರೀಸೃಪಗಳು, ಸಸ್ತನಿಗಳಿವೆ. ಅಂತಹ ಪ್ರದೇಶಗಳ ಮೂಲ ಸ್ವರೂಪ ಬದಲಾಯಿಸಿದರೆ ಆ ವಿಶಿಷ್ಟ ಜೀವಿಗಳು ಅಲ್ಲಿಂದ ಕಣ್ಮರೆಯಾಗುತ್ತವೆ. ಇದಕ್ಕೆ ಅತ್ಯುತ್ತಮ ಉದಾಹರಣೆ, ಅದೇ ಪಶ್ಚಿಮಘಟ್ಟದ ಶೋಲಾ ಹುಲ್ಲುಗಾವಲುಗಳಲ್ಲಿ ಹಸಿರೀಕರಣದ ಹೆಸರಿನಲ್ಲಿ ಅರಣ್ಯ ಇಲಾಖೆ ಅಕೇಶಿಯಾ ನೆಟ್ಟು, ಆ ನೆಲ ಇಂದು ಬರಡಾಗಿರುವುದು.

ಮಳೆಗಾಲ ಪ್ರಾರಂಭವಾಗಿದೆ. ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಹಲವರು ಯೋಜನೆ ರೂಪಿಸುತ್ತಿದ್ದಾರೆ. ನಮ್ಮ ಅಭಿವೃದ್ಧಿ ಮಾದರಿಗಳು ಪಟ್ಟಣಗಳಲ್ಲಿರುವ ಎಲ್ಲಾ ವೈವಿಧ್ಯಗಳನ್ನು ನಾಶಪಡಿಸಿರುವುದರಿಂದ ಅಲ್ಲಿ ಇಂದು ಗಿಡ ನೆಡಬೇಕಾದ ಅವಶ್ಯಕತೆ ಇದೆ. ಪಟ್ಟಣದಲ್ಲಿ ಹಸಿರು ಹೆಚ್ಚಿಸಬೇಕಾದುದು ಅಗತ್ಯವಾಗಿ ಆಗಬೇಕಾದ ಕೆಲಸ. ಆದರೆ ಯಾವುದೋ ಕಾಡಿಗೋ ಗುಡ್ಡಕ್ಕೋ ಹೋಗಿ, ಪರಿಸರ ಸಂರಕ್ಷಣೆಯ ಉತ್ಸುಕತೆಯಿಂದ ಬೀಜದುಂಡೆ ಎಸೆಯುವುದು ಪರಿಸರದ ಮೇಲೆ ದುಷ್ಪರಿಣಾಮ ಬೀರುವುದೇ ಹೆಚ್ಚು ಎಂಬ ಅರಿವು ಹೆಚ್ಚಿನವರಿಗಿಲ್ಲ. ಅವರು ಎಸೆದ ಬೀಜದುಂಡೆಯಿಂದ ಗಿಡಗಳು ಹುಟ್ಟುತ್ತವೋ ಇಲ್ಲವೋ ಅದು ಬೇರೆಯದೇ ಚರ್ಚೆ. ಆದರೆ ಬೀಜದುಂಡೆಗೆ ಬಳಸುವ ಮಣ್ಣಿನಲ್ಲಿ ಪಾರ್ಥೇನಿಯಂ, ಲಂಟಾನಾದಂತಹ ವಿದೇಶಿ ಕಳೆಗಳ ಬೀಜಗಳಿರಬಹುದು. ನಮ್ಮ ಪರಿಸರ ವ್ಯವಸ್ಥೆಯ ಆರೋಗ್ಯಕ್ಕೆ ಮಾರಕವಾದ ಅಂತಹವನ್ನು ನಾವೇ ಪಸರಿಸಿದಂತೆ ಆಗುತ್ತದೆ. ಇಲ್ಲಿಯವರೆಗೆ ಇಲ್ಲದ ಸಮಸ್ಯೆಯೊಂದನ್ನು ಅಲ್ಲಿ ಹೊಸತಾಗಿ ಸೃಷ್ಟಿಸಿದಂತೆ ಆಗುತ್ತದೆ. ಇನ್ನು ಗಿಡ ನೆಡುವುದೆಂದರೆ ಅರಳಿ, ಆಲ, ಮತ್ತಿ, ಬೇವು, ಹೊಂಗೆ ಎಂಬ ಭಾವನೆಯಿದೆ. ಅವು ಎಲ್ಲಾ ಕಡೆಗೂ ಸ್ಥಳೀಯ ಜಾತಿ ಗಿಡಗಳಾಗಿರಲು ಸಾಧ್ಯವಿಲ್ಲ. 

ಮೊದಲನೆಯದಾಗಿ, ವನಮಹೋತ್ಸವ ಕಾರ್ಯಕ್ರಮ ಆಯೋಜಿಸುವವರಿಗೆ ಪರಿಸರ ಸೂಕ್ಷ್ಮತೆ ಇರಬೇಕು. ನಿಸರ್ಗ ಸಂರಕ್ಷಣೆಯ ಉತ್ಸಾಹಕ್ಕೆ ಪರಿಸರದ ಅರಿವು ಮತ್ತು ವೈಜ್ಞಾನಿಕ ಪ್ರಜ್ಞೆಯ ತಿಳಿವು ಕೂಡಾ ಅವಶ್ಯ. ಗಿಡ ನೆಡುವಾಗ ಆ ಸ್ಥಳದ ಮಣ್ಣು, ನೀರು, ಗಾಳಿ, ಮಳೆ,  ಹವಾಗುಣದ ಅರಿವು ಇರಲೇಬೇಕು. ಜೊತೆಗೆ ನೆಡುವ ಗಿಡಗಳು ಸ್ಥಳೀಯ ಜಾತಿಯವಾಗಿರಬೇಕು. ಹವಾಗುಣ ಬದಲಾವಣೆಯನ್ನು ಎದುರಿಸಿ ಬೆಳೆಯುವ ಶಕ್ತಿ ಸ್ಥಳೀಯ ಜಾತಿಯ ಸಸ್ಯಗಳಿಗೆ ಹೆಚ್ಚಾಗಿರುತ್ತದೆ ಎಂಬ ಅರಿವು ಕೂಡಾ ಅತಿ ಅಗತ್ಯ.

ಅಕೇಶಿಯಾ, ನೀಲಗಿರಿ, ಕ್ಯಾಸುರೀನದಂತಹ ಏಕಜಾತಿಯ ನೆಡುತೋಪುಗಳನ್ನು ನೆಟ್ಟ ಪ್ರದೇಶ ಮತ್ತು ವಿಪರೀತ ಮನುಷ್ಯ ಹಸ್ತಕ್ಷೇಪದಿಂದ ಮಣ್ಣಿನ ಸಾರವೇ ನಾಶವಾಗಿರುವಂತಹ ಪ್ರದೇಶಗಳಲ್ಲಿ ಪುನಃ ಪರಿಸರ ವ್ಯವಸ್ಥೆ ರೂಪುಗೊಳ್ಳಲು ಗಿಡ ನೆಡುವ, ನೀರು ಹಾಕುವ, ರಕ್ಷಣೆ ಒದಗಿಸುವಂತಹ ಅವಶ್ಯಕತೆ ಇರುತ್ತದೆ. ಅದನ್ನು ಬಿಟ್ಟು ಉಳಿದ ಜಾಗಗಳಲ್ಲಿ ಮನುಷ್ಯ ಹಸ್ತಕ್ಷೇಪ ಮಾಡದಿರುವುದೇ ನಾವಲ್ಲಿಗೆ ಮಾಡಬಹುದಾದ ದೊಡ್ಡ ಉಪಕಾರ. ಅಷ್ಟರಮಟ್ಟಿಗೆ ಪರಿಸರದ ಸಂಕೀರ್ಣ ವ್ಯವಸ್ಥೆಯನ್ನು ಕೆಡಿಸುವುದನ್ನು ನಾವು ಸಣ್ಣ ಮಟ್ಟಿಗಾದರೂ ತಡೆಯಬಹುದು.

‘ಮನುಷ್ಯ ನೆಟ್ಟು ಬೆಳೆಸಿದ ಕಾಡಿಗಿಂತ ಸಹಜ ಹುಲ್ಲುಗಾವಲುಗಳು ಹೆಚ್ಚು ಕಾರ್ಬನ್ ಹೀರಿಕೊಳ್ಳುತ್ತವೆ’ ಎಂದು ವೈಜ್ಞಾನಿಕ ಸಂಶೋಧನೆಯೊಂದು ಅಭಿಪ್ರಾಯ ಪಡುತ್ತದೆ. ಸ್ಥಳೀಯ ಮಣ್ಣಿನ ಗುಣಮಟ್ಟ, ನೀರಿನ ಲಭ್ಯತೆ, ಹವಾಗುಣದಂತಹ ಸಂಗತಿಗಳ ಆಧಾರದ ಮೇಲೆ ಪರಿಸರ ವ್ಯವಸ್ಥೆ ಪುನರ್ಜನ್ಮ ಪಡೆಯಲು ಅಲ್ಲಿ ಮನುಷ್ಯ ಹಸ್ತಕ್ಷೇಪದ ಅವಶ್ಯಕತೆ ಇದೆಯೋ ಇಲ್ಲವೋ ಎಂದು ನಿರ್ಧರಿಸಬೇಕಾಗುತ್ತದೆ. ಅದನ್ನು ಬಿಟ್ಟು ಖಾಲಿ ಜಾಗ ಕಂಡಲ್ಲೆಲ್ಲಾ ಗಿಡ ನೆಡಲು ಹೋಗುವುದು ಅವಿವೇಕವಾಗುತ್ತದೆ.

ಗಿಡ ನೆಡುವುದು ಸಂಪೂರ್ಣ ತಪ್ಪು ಎಂದು ಹೇಳುತ್ತಿಲ್ಲ. ಆದರೆ ಸ್ಥಳೀಯ ಪರಿಸರ ವ್ಯವಸ್ಥೆಯ ಅರಿವಿಲ್ಲದೇ ಪರಿಸರ ಕಾಳಜಿಯ ಹೆಸರಿನಲ್ಲಿ ಮತ್ತೊಂದು ರೀತಿಯ ಅವಘಡ ಜರುಗದಂತೆ ಎಚ್ಚರ ವಹಿಸಬೇಕಾದುದು ಅತೀ ಅವಶ್ಯ. ಗಿಡ ನೆಡುವ ಚಟುವಟಿಕೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದು ಹಾಗೂ ತಜ್ಞರ ಸಲಹೆಗಳನ್ನು ಪಡೆಯುವುದು ಹೆಚ್ಚು ವಿವೇಕದ ನಡೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT