ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವಿನ ಸಮಸ್ಯೆ: ನಿವಾರಣೆ ಹೇಗೆ? ‌

ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯವು ಪೌಷ್ಟಿಕ ಆಹಾರವನ್ನು ಅವಲಂಬಿಸಿದೆ ಎಂಬುದು ನಮ್ಮ ಸರ್ಕಾರಗಳಿಗೆ ಮನವರಿಕೆ ಆದಂತಿಲ್ಲ
Last Updated 20 ಅಕ್ಟೋಬರ್ 2019, 18:37 IST
ಅಕ್ಷರ ಗಾತ್ರ

ಪ್ರತಿವರ್ಷದಂತೆ ಈ ವರ್ಷವೂ ಜಾಗತಿಕ ಹಸಿವಿನ ಸೂಚ್ಯಂಕದ ವರದಿ ಬಿಡುಗಡೆಯಾಗಿದೆ. ಕಳೆದ ವರ್ಷ 103ನೇ ಸ್ಥಾನದಲ್ಲಿದ್ದ ಭಾರತ, ಈ ಸಲ 102ನೇ ಸ್ಥಾನಕ್ಕೆ ಬಂದು ಕೊಂಚ ಏರಿಕೆಯನ್ನು ಕಂಡುಕೊಂಡಿದ್ದರೂ ಹಸಿವು ನಿರ್ಮೂಲನೆಯಲ್ಲಿ ನೆರೆಯ ರಾಷ್ಟ್ರಗಳಾದ ಚೀನಾ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕಿಂತ ಕೆಳಮಟ್ಟದಲ್ಲಿ ಇರುವುದು ಆತಂಕಕ್ಕೆ ಕಾರಣವಾಗಿದೆ. ವಾರ್ಷಿಕ ಸೂಚ್ಯಂಕಕ್ಕೆ ಪರಿಗಣಿಸಲಾದ 117 ರಾಷ್ಟ್ರಗಳಲ್ಲಿ ಭಾರತ 30.3 ಅಂಕಗಳನ್ನು ಪಡೆದು (ಹೆಚ್ಚು ಅಂಕ ಪಡೆದರೆ ಹಸಿವಿನ ಸಮಸ್ಯೆ ಅಧಿಕ, ಕಡಿಮೆ‌ ಪಡೆದರೆ ಹಸಿವಿನ ಸಮಸ್ಯೆ ಕಡಿಮೆ ಮತ್ತು ಶೂನ್ಯ ಅಂಕ ಪಡೆದರೆ ಹಸಿವುಮುಕ್ತ ಎಂದರ್ಥ) ಈ ಸ್ಥಾನದಲ್ಲಿ ಬಂದು‌ ನಿಂತಿದೆ. ಈ ಮೂಲಕ ನಮ್ಮನ್ನು ಎಚ್ಚರಿಸಿದೆ.

ಐರ್ಲೆಂಡ್‌ನ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ಜರ್ಮನಿಯ ವೆಲ್ಟ್‌ಹಂಗರ್‌ಹಿಲ್ಫ್ ಎನ್ನುವ ಜಾಗತಿಕ ಸ್ವಯಂ ಸೇವಾ ಸಂಸ್ಥೆಗಳು ಜಂಟಿಯಾಗಿ ಕೈಗೊಳ್ಳುವ ಈ ಸಮೀಕ್ಷೆಯು ತನ್ನ‌ ಕರಾರುವಾಕ್ಕುತನಕ್ಕಾಗಿ ಹೆಸರು ಮಾಡಿದೆ. ಬೆಲಾರಸ್, ಉಕ್ರೇನ್, ಟರ್ಕಿ, ಕ್ಯೂಬಾ ಮತ್ತು ಕುವೈತ್ ದೇಶಗಳು ಅಗ್ರ ಐದು ಸ್ಥಾನಗಳನ್ನು ಗಳಿಸಿಕೊಂಡಿವೆ. ವಿಶೇಷವೆಂದರೆ, ಆಂತರಿಕ ಕ್ಷೋಭೆಯಂತಹ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದ್ದ ಮಧ್ಯಪ್ರಾಚ್ಯದ ಸಿರಿಯಾ ಮತ್ತು ಪೂರ್ವ ಆಫ್ರಿಕಾದ ಜಿಬೂಟಿಯು ಭಾರತಕ್ಕಿಂತ ಉತ್ತಮ ಸಾಧನೆ ತೋರಿರುವುದು ಆ ದೇಶಗಳಲ್ಲಿ ಆಹಾರ, ಶಿಶು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ವಹಿಸಿರುವ ಕಾಳಜಿಯನ್ನು ತೋರುತ್ತದೆ.

ನಮ್ಮ ಜನರಲ್ಲಿನ ಅಪೌಷ್ಟಿಕತೆ, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಕ್ಕಳು ಮತ್ತು ಶಿಶುಮರಣ ಪ್ರಮಾಣದ ಸೂಚ್ಯಂಕದಲ್ಲಿ ವ್ಯಕ್ತವಾದ ಅಂಶಗಳನ್ನು ಪರಿಗಣಿಸಿ ನಿರ್ಧರಿಸಲಾಗುವ ಈ ವರದಿಯು ವಿವಿಧ ರಾಷ್ಟ್ರಗಳ ಜನಜೀವನ ಮತ್ತು ಆರೋಗ್ಯದ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುತ್ತದೆ. ಪ್ರಸ್ತುತ ಭಾರತವು ಶಿಶುಮರಣ ವಿಭಾಗದಲ್ಲಿ ಮಾತ್ರ ಉತ್ತಮ ಸ್ಥಿತಿಯನ್ನು ಕಾಪಾಡಿಕೊಂಡು‌, ಉಳಿದ ಮೂರು ವಿಭಾಗಗಳಲ್ಲಿ ಗಣನೀಯ ಸಾಧನೆ ತೋರಿಲ್ಲ. ಹಾಗಾಗಿ, ಆಹಾರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ನಮ್ಮ ಯೋಜನೆಗಳನ್ನು ಪುನರ್‌ ವಿಮರ್ಶೆಗೆ ಒಳಪಡಿಸುವ ಬಗ್ಗೆ ಚಿಂತನೆ‌ ನಡೆಯಬೇಕಿದೆ.

ದೇಶದಲ್ಲಿನ ಆಹಾರಧಾನ್ಯ ಉತ್ಪಾದನೆ, ಅದರ ಶೇಖರಣೆ, ನಿರ್ವಹಣೆ ಮತ್ತು ವಿತರಣೆಗಳ ಕಡೆ ಗಮನ ಹರಿಸಬೇಕಾದ ತುರ್ತನ್ನು ಮನಗಾಣಬೇಕಿದೆ. ಕಾರ್ಪೊರೇಟ್ ಸಂಸ್ಕೃತಿಯ ಕಡೆ ವಾಲುತ್ತಿರುವ ದೇಶವು ಕೃಷಿಯ ವಿಷಯದಲ್ಲಿ ಅನೇಕ‌ ಸವಾಲುಗಳನ್ನು ಎದುರಿಸುತ್ತಿದೆ. ಕೃಷಿ ಭೂಮಿಯು ನಗರೀಕರಣದ ವೇಗಕ್ಕೆ ಬಲಿಯಾಗುತ್ತಿದೆ. ಮಳೆಯ‌ ಅಭಾವದಿಂದ ನೀರಿನ ಸಮಸ್ಯೆ ತಲೆದೋರಿದೆ. ಕೃಷಿ ಬಗ್ಗೆ ಯುವಜನ
ರ‌ಲ್ಲಿ ಆಸಕ್ತಿ ಉಳಿದಿಲ್ಲ. ಬೆಲೆಯ ಖಾತರಿ ಇಲ್ಲ. ಈ ಎಲ್ಲ ಕಾರಣಗಳಿಂದ ಕೃಷಿ ಕ್ಷೇತ್ರ ಸಂಪೂರ್ಣ ಸೊರಗಿದೆ.

ಒಂದೊಮ್ಮೆ ಉತ್ತಮ ಬೆಳೆ ಬಂದರೂ ಆಹಾರ ಧಾನ್ಯಗಳ ಅಸಮರ್ಪಕ ಶೇಖರಣೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ನ್ಯೂನತೆಗಳಿಂದ ನಾಗರಿಕರಿಗೆ ಅಗತ್ಯ ಆಹಾರ ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಆಹಾರ ಧಾನ್ಯಗಳನ್ನು ಬೆಳೆಯುವ ಮತ್ತು ಸಂಗ್ರಹಿಸಿಡುವ ಸಂದರ್ಭದಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಕೂಡ ಗುಣಮಟ್ಟದ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ.

ಸದೃಢ ಮಾನವ ಸಂಪನ್ಮೂಲವನ್ನು ಸೃಷ್ಟಿಸಬೇಕಾದರೆ ಅದಕ್ಕೆ ಪೌಷ್ಟಿಕ ಆಹಾರ ಬಹಳ ಮುಖ್ಯ. ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯವು ಅದರ ಮೇಲೆಯೇ ಅವಲಂಬಿತವಾಗಿದೆ ಎಂಬುದು ನಮ್ಮ ಸರ್ಕಾರಗಳಿಗೆ ಇನ್ನೂ ಮನವರಿಕೆ ಆದಂತಿಲ್ಲ.

ಆಹಾರ ಪೂರೈಕೆಗೆ ಕೇಂದ್ರ ಮತ್ತು‌ ರಾಜ್ಯ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವುಗಳು ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್, ಕೃಷಿ ವಿಕಾಸ, ಫಸಲ್ ಬಿಮಾ, ಮಧ್ಯಾಹ್ನದ ಬಿಸಿಯೂಟದಂತಹ ಅನೇಕ ಯೋಜನೆಗಳಲ್ಲಿ ಕಾಳದಂಧೆಕೋರತನ‌, ಭ್ರಷ್ಟಾಚಾರದಂತಹ ಹಲವಾರು ಅಂಶಗಳು ಮತ್ತು ವಿತರಣಾ ವ್ಯವಸ್ಥೆಯಲ್ಲಿ ನ್ಯೂನತೆಗಳು ಮೇಳೈಸಿರುವುದರಿಂದ ಅವು ಫಲಾನುಭವಿಗಳಿಗೆ‌ ಅಗತ್ಯಕ್ಕೆ ಅನುಗುಣವಾಗಿ ತಲುಪುತ್ತಿಲ್ಲ.

ಜನರ ಆರೋಗ್ಯ ಮತ್ತು ಅವರ ಸಂತೋಷದ‌ ಸೂಚ್ಯಂಕಗಳು ದೇಶದ ಅಭಿವೃದ್ಧಿ ಸೂಚ್ಯಂಕಕ್ಕೆ ಮಾನದಂಡವಾದರೆ ಅವುಗಳಿಗೆ ಮಾನ್ಯತೆ ದೊರಕುತ್ತದೆ. ಈ ವಿಚಾರವು ರಾಷ್ಟ್ರೀಯ ಆದ್ಯತೆಯಾಗಿ ರೂಪುಗೊಳ್ಳಬೇಕು. ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಆಹಾರ ಸಂಸ್ಥೆಗಳು ಹಾಗೂ ಆಹಾರ ವಿಜ್ಞಾನ ವಿಭಾಗಗಳಲ್ಲಿ ಈ ನಿಟ್ಟಿನಲ್ಲಿ ಸೂಕ್ತ ಸಂಶೋಧನೆಗಳು ನಡೆದು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಅದಷ್ಟೇ ಅಲ್ಲದೆ, ಸಮಸ್ಯೆಯ ವಿವಿಧ ಮಗ್ಗುಲುಗಳನ್ನು ಸರ್ಕಾರಗಳು ಅರಿತು ಆಹಾರ ಭದ್ರತೆಗೆ ಸಂಬಂಧಿಸಿದ ಯೋಜನೆಗಳನ್ನು ಖಾತರಿಪಡಿಸಿ ಮತ್ತಷ್ಟು ಬಲಪಡಿಸಬೇಕಿದೆ. ಇದರ‌ ಜೊತೆಗೆ ಈ ಸಮಸ್ಯೆಯ ನಿವಾರಣೆಗೆ ಅಗತ್ಯ ಪರಿಹಾರಾತ್ಮಕ ಕ್ರಮಗಳಿಂದ ಮಾತ್ರ ಅಪೌಷ್ಟಿಕತೆಯಂತಹ ಸಮಸ್ಯೆಗಳಿಂದ ಹೊರಬಂದು‌, ಅಂತರ
ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT