ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲಿ ಹಾಕುವವರು ಯಾರು?

ರಾಜಕೀಯವು ಶರಣರ ಧರ್ಮವನ್ನು ನುಂಗಿದೆಯೋ ಅಥವಾ ಶರಣರೇ ರಾಜಕೀಯವನ್ನು ನುಂಗಿದ್ದಾರೋ ಎಂಬುದು ಸ್ಪಷ್ಟವಾಗಬೇಕಾಗಿದೆ
Last Updated 31 ಜನವರಿ 2021, 19:31 IST
ಅಕ್ಷರ ಗಾತ್ರ

‘ಬೇಲಿ ಹಾಕುವುದು ಬಸವ ತತ್ವವಲ್ಲ’ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಮ್ಮ ಲೇಖನದಲ್ಲಿ (ಪ್ರ.ವಾ., ಜ. 30) ಹೇಳಿದ್ದಾರೆ. ಅದು ಸತ್ಯ. ಆದರೆ ಮೊನ್ನೆ ಸ್ಥಾಪಿತವಾದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟಕ್ಕೆ ಯಾರೂ ಯಾವುದೇ ಬೇಲಿಯನ್ನು ಹಾಕಿಲ್ಲ. ಮುರುಘಾ ಶರಣರೂ ಆ ಒಕ್ಕೂಟದ ಸದಸ್ಯರಾಗಬಹುದು. ಆದರೆ, ಅವರು ಆ ಒಕ್ಕೂಟವನ್ನು ಸೇರುವುದಿಲ್ಲ. ಕಾರಣವೆ೦ದರೆ, ಅವರನ್ನು ಕೇಳದೇ ಆ ಒಕ್ಕೂಟ ರಚನೆಯಾಗಿದೆ. ಅದೇ ಅವರ ಹೊಟ್ಟೆ ಉರಿಗೆ ಕಾರಣವಾಗಿದೆ.

ಅಷ್ಟಕ್ಕೂ ಬೇಲಿ ಹಾಕುತ್ತಿದ್ದವರು ಮುರುಘಾ ಶರಣರೇ ಆಗಿದ್ದಾರೆ. ಒಂದೂವರೆ ವಷ೯ದ ಹಿ೦ದೆ ಇದೇ ಶರಣರು ಲಿಂಗಾಯತ ಮಹಾಸಭೆಯ ಹನ್ನೆರಡು ಮಂದಿ ಪದಾಧಿಕಾರಿಗಳನ್ನು ಬೆಂಗಳೂರಿನ ಗಾಂಧಿನಗರದಲ್ಲಿರುವ ಅವರ ಮಠಕ್ಕೆ ಕರೆದು, ಸಿರಿಗೆರೆ ಮಠದವರೊಡನೆ ಲಿಂಗಾಯತ ಮಹಾಸಭೆಯವರು ಸ೦ಪರ್ಕ ಇಟ್ಟುಕೊಳ್ಳಬಾರದು ಎಂದು ಷರತ್ತು ಹಾಕಿದರು. ಅದನ್ನು ಆ ಪದಾಧಿಕಾರಿಗಳು ಒಪ್ಪದಿದ್ದರೆ ತಾವು ಲಿಂಗಾಯತ ಸ್ವತ೦ತ್ರ ಧರ್ಮದ ಹೋರಾಟಕ್ಕೆ ಬೆಂಬಲ ನೀಡುವುದಿಲ್ಲ ಎಂದು ನೇರವಾಗಿ ಹೇಳಿದರು ಮತ್ತು ಹಾಗೆಯೇ ಮಾಡಿದರು.

ಆ ನಂತರ ಅವರೇ ಸಂಘಟಿಸಿದ ‘ಅಸಂಖ್ಯ ಪ್ರಮಥರ ಗಣಮೇಳ’ದ ಕಾಲದಲ್ಲಿ, ಸ್ವತ೦ತ್ರ ಧರ್ಮದ ಹೋರಾಟ ಮುಗಿದ ಅಧ್ಯಾಯವೆ೦ದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಅಮಿತ್ ಶಾ ಅವರು ಚುನಾವಣಾ ವೇಳೆ ಮುರುಘಾ ಮಠಕ್ಕೆ ಭೇಟಿ ಕೊಟ್ಟಾಗ ಅವರಿಗೆ ಮುಜುಗರವಾಗುವ೦ತೆ, ಲಿಂಗಾಯತಕ್ಕೆ ಸ್ವತ೦ತ್ರ ಧರ್ಮದ ಮಾನ್ಯತೆ ನೀಡಲು ಒತ್ತಾಯಿಸಿ ಅಗ್ಗದ ಪ್ರಚಾರ ಗಿಟ್ಟಿಸಿಕೊಂಡವರೂ ಇದೇ ಶರಣರು!

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಎರಡು ತಿಂಗಳ ಹಿಂದೆ ಈ ಶರಣರೇ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳನ್ನು ತಮ್ಮ ಮಠಕ್ಕೆ ಇನ್ನೊಂದು ಕೂಟವನ್ನು ರಚಿಸುವ ಸಂಬಂಧ ಮಾತುಕತೆಗೆ ಕರೆದರು. ಶರಣರ ಸ್ವಭಾವವನ್ನು ಚೆನ್ನಾಗಿ ತಿಳಿದ ಅವರು, ಆ ಮಠಕ್ಕೆ ಹೋಗಲಿಲ್ಲ. ಅಷ್ಟರಲ್ಲಿ ನೂರಕ್ಕೂ ಹೆಚ್ಚು ಮಠಾಧೀಶರು ಹೊಸ ಒಕ್ಕೂಟವನ್ನು ರಚಿಸಿಕೊಂಡರು. ಅದು ಅವರಿಗೆ ನುಂಗಲಾರದ ತುತ್ತಾಗಿದೆ! ಇವೆಲ್ಲವೂ ಬೇಲಿ ಹಾಕುವ ಉದಾಹರಣೆಗಳಲ್ಲವೇ?

ಎರಡನೆಯದಾಗಿ, ಶರಣರು ‘ರಾಜಕೀಯವು ಧರ್ಮವನ್ನು ನುಂಗಬಾರದು’ ಎಂದಿದ್ದಾರೆ. ಸರಿಯಾದ ಮಾತೆ. ಅದಕ್ಕೆ ಉದಾಹರಣೆ ನೀಡಿ ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ ಮತ್ತು ವಿಜಯಪುರದಲ್ಲಿ ನಡೆದ ಲಿಂಗಾಯತ ರ‍್ಯಾಲಿಗಳು ರಾಜಕೀಯವಾಗಿದ್ದವು ಎಂದು ಹೇಳಿದ್ದಾರೆ. ತಾವೂ ಅವುಗಳಲ್ಲಿ ಭಾಗವಹಿಸಿದ್ದಾಗಿ ಸಹ ಹೇಳಿದ್ದಾರೆ. ಹಾಗಿದ್ದರೆ ಅವರು ಭಾಗವಹಿಸಿದ್ದು ಏತಕ್ಕೆ? ಆ ಪಕ್ಷದ ನೇತೃತ್ವದ ಸರ್ಕಾರದಿ೦ದ ತಮ್ಮ ಬಸವಮೂರ್ತಿ ಯೋಜನೆಗೆ ಹಣ ಗಿಟ್ಟಿಸಿಕೊಳ್ಳಬೇಕಾಗಿತ್ತು. ಆ ಸರ್ಕಾರದ ಅವಧಿಯಲ್ಲಿ ಶರಣರಿಗೆ ಮಂಜೂರಾದ ಹಣ ಎಷ್ಟು ಎನ್ನುವುದನ್ನು ಶರಣರು ಸಾರ್ವಜನಿಕರಿಗೆ ತಿಳಿಸಬೇಕು.

ಅವರೇ ಹೇಳುವಂತೆ, ಆ ಪಕ್ಷದ ನೇತೃತ್ವದ ಸರ್ಕಾರ ಹೋಯಿತು. ಶಾಸಕರನ್ನು ಖರೀದಿಸುವ ಮೂಲಕ ಇನ್ನೊಂದು ಪಕ್ಷದ ನೇತೃತ್ವದ ಸರ್ಕಾರ ಅಧಿಕಾರ ಪಡೆಯಿತು. ತಡಮಾಡದೆ ಶರಣರು ಹೊಸ ಸರ್ಕಾರದ ಶಾಸಕರನ್ನು ಓಲೈಸುತ್ತ ಆ ಸರ್ಕಾರದ ಮುಖ್ಯಸ್ಥರ ಮಗನ ನೇತೃತ್ವದಲ್ಲಿ ಶರಣ ಮೇಳವನ್ನು ಸ೦ಘಟಿಸಿಬಿಟ್ಟರು. ಆ ಮೂಲಕ ಶರಣರು ಹೊಸ ಸರ್ಕಾರದಿ೦ದ ಈವರೆಗೆ ತಮ್ಮ ಬಸವಮೂರ್ತಿ ಯೋಜನೆಗೆ ಗಿಟ್ಟಿಸಿಕೊ೦ಡ ಹಣ ಎಷ್ಟು ಎನ್ನುವುದೂ ಸಾರ್ವಜನಿಕರಿಗೆ ತಿಳಿಯಲಿ. ಏಕೆಂದರೆ, ಅದು ಜನರು ನೀಡಿದ ತೆರಿಗೆಯಿಂದ ಬಂದ ಹಣ.

ಅಲ್ಲದೆ, ನಮ್ಮ ಪ್ರಧಾನ ಮಂತ್ರಿಯವರು ಬಸವಣ್ಣನವರನ್ನು ಬಹಳ ಮೆಚ್ಚುತ್ತಾರೆ ಎನ್ನುವುದು ಗೊತ್ತಾದ ತಕ್ಷಣವೇ ಶರಣರು ಆ ಪಕ್ಷದ ಮುಂಚೂಣಿ ನಾಯಕರ ಮೂಲಕ ಪ್ರಧಾನಿಯವರನ್ನು ಸಂಪರ್ಕಿಸಿ, ತಮ್ಮ ಬಸವಮೂರ್ತಿ ಯೋಜನೆಗೆ ಹಣ ನೀಡುವಂತೆ ಮನವಿ ಸಲ್ಲಿಸಿದರು. ಕೇಂದ್ರ ಲೋಕೋಪಯೋಗಿ ಇಲಾಖೆಯು (ಸಿಪಿಡಬ್ಲ್ಯುಡಿ) ಈ ಯೋಜನೆಯು ಅತ್ಯ೦ತ ಅಭದ್ರವೂ ದೋಷಪೂರಿತವೂ ಆಗಿದೆ ಎಂದು ವರದಿ ನೀಡಿದೆ. ಅದನ್ನು ಬದಿಗಿರಿಸಿ, ಹೇಗಾದರೂ ಮಾಡಿ ಹಣ ಪಡೆಯಲು ಶರಣರು ಹೆಣಗಾಡುತ್ತಿದ್ದಾರೆ. ಈ ಎಲ್ಲ ಘಟನೆಗಳು ಏನನ್ನು ಸೂಚಿಸುತ್ತವೆ? ರಾಜಕೀಯವು ಶರಣರ ಧರ್ಮವನ್ನು ನುಂಗಿದೆಯೋ ಅಥವಾ ಶರಣರೇ ರಾಜಕೀಯವನ್ನು ನುಂಗಿದ್ದಾರೋ?

ಸ್ವತ೦ತ್ರ ಧರ್ಮದ ಹೋರಾಟ ನಿಂತುಹೋಗಿದೆ ಎಂದು ಶರಣರು ಬರೆದಿದ್ದಾರೆ. ಆದರೆ ಅದು ನಿಂತಿಲ್ಲ. ಈಗಾಗಲೇ 15 ಜಿಲ್ಲಾ ಘಟಕಗಳನ್ನೂ 25 ತಾಲ್ಲೂಕು ಘಟಕಗಳನ್ನೂ ಹೊ೦ದಿದೆ. ಪ್ರತ್ಯೇಕವಾಗಿ, ಮಹಿಳಾ ಮತ್ತು ಯುವ ಘಟಕಗಳು ಬೆಳೆಯುತ್ತಿವೆ. ಅದರ ಸದಸ್ಯರ ಸಂಖ್ಯೆಯೂ ನಿರಂತರವಾಗಿ ಬೆಳೆಯುತ್ತಿದೆ. 2018ರಲ್ಲಿ 280 ಸದಸ್ಯರಿ೦ದ ಪ್ರಾರಂಭವಾದ ಅದು ಇಂದು 11 ಸಾವಿರಕ್ಕೂ ಮೇಲ್ಪಟ್ಟು ಸದಸ್ಯರನ್ನು ಹೊ೦ದಿದೆ. ಬಹುತೇಕರು ರಾಜಕೀಯದಿಂದ ದೂರವಿದ್ದವರೆ ಸದಸ್ಯರಾಗಿರುತ್ತಾರೆ. ಯಾವುದೇ ರಾಜಕೀಯ ಪಕ್ಷವನ್ನು ಈ ಮಹಾಸಭೆ ಬೆ೦ಬಲಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ.

ಶರಣರು ತಮ್ಮ ನಡೆ ಮತ್ತು ನುಡಿಗಳ ನಡುವಿನ ವೈರುಧ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರೆ ಅದು ಶರಣರಿಗೂ ಒಳ್ಳೆಯದು ಮತ್ತು ಸಮಾಜಕ್ಕೂ ಒಳ್ಳೆಯದು.

ಲೇಖಕ: ನಿವೃತ್ತ ಐ.ಎ.ಎಸ್. ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT