ಕೊಪ್ಪಳ: ಇಲ್ಲಿನ ಗವಿಸಿದ್ಧೇಶ್ವರ ಮಠದ ಪ್ರಸಿದ್ಧ ಮಹಾರಥೋತ್ಸವ ಭಾನುವಾರ ಸಂಜೆ 5.30ಕ್ಕೆ ನಡೆಯಲಿದೆಯಾದರೂ, ಬೆಳಿಗ್ಗೆಯಿಂದಲೇ ಭಕ್ತರು ತಂಡೋಪತಂಡವಾಗಿ ಮಠಕ್ಕೆ ಬರುತ್ತಿದ್ದಾರೆ.
ಕೋವಿಡ್ ಕಾರಣದಿಂದ ಎರಡು ವರ್ಷ ದೊಡ್ಡ ಮಟ್ಟದಲ್ಲಿ ರಥೋತ್ಸವ ನಡೆದಿರಲಿಲ್ಲ. ಹೋದ ವರ್ಷ ಬೆಳಗಿನ ಜಾವ ಹೆಚ್ಚು ಜನರಿಗೆ ಮಾಹಿತಿ ಇಲ್ಲದಂತೆ ರಥೋತ್ಸವ ನಡೆದಿತ್ತು. ಆದರೂ 50 ಸಾವಿರಕ್ಕಿಂತಲೂ ಹೆಚ್ಚು ಜನ ಬಂದಿದ್ದರು. ಈ ಬಾರಿ ಅದ್ಧೂರಿಯಾಗಿ ರಥೋತ್ಸವ ಜರುಗಲಿದೆ ಎಂದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯೇ ಹೇಳಿರುವುದರಿಂದ ಲಕ್ಷಾಂತರ ಭಕ್ತರು ಸೇರುವುದು ನಿಶ್ಚಿತ.
ಜಿಲ್ಲೆ, ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಂದಲೂ ಭಕ್ತರು ಬಂದಿದ್ದಾರೆ. ಜಿಲ್ಲೆಯ ಕೆಲ ಭಕ್ತರು ದೀಡ್ ನಮಸ್ಕಾರ ಹಾಕಿಕೊಂಡು, ಇನ್ನೂ ಕೆಲ ಭಕ್ತರು ಪಾದಯಾತ್ರೆಯ ಮೂಲಕ ಮಠಕ್ಕೆ ಬರುತ್ತಿದ್ದಾರೆ.
ಪೂಜೆ: ಮಹಾರಥೋತ್ಸವ ಅಂಗವಾಗಿ ಗವಿಸಿದ್ಧೇಶ್ವರ ಗದ್ದುಗೆಗೆ ಹೂಗಳಿಂದ ಅಲಂಕಾರ ಮಾಡಲಾಗಿದೆ.