ಅಲಿ ಸರ್ದಾರ್ ಜಫ್ರಿಗೆ ಜ್ಞಾನಪೀಠ ಪ್ರಶಸ್ತಿ ನವದೆಹಲಿ, ಜ.16 (ಪಿಟಿಐ)– ಖ್ಯಾತ ಉರ್ದು ಲೇಖಕ ಅಲಿ ಸರ್ದಾರ್ ಜಫ್ರಿ ಅವರನ್ನು 1997ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜ್ಞಾನಪೀಠ ಆಯ್ಕೆ ಸಮಿತಿಯ ಅಧ್ಯಕ್ಷ ಡಿ. ಕರಣ್ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.
ಪ್ರಶಸ್ತಿಯು ರೂ. 2.5 ಲಕ್ಷ ನಗದನ್ನು ಒಳಗೊಂಡಿದೆ.
ಅಲಿ ಸರ್ದಾರ್ ಜಫ್ರಿ ಅವರು 1977ರಿಂದ ಕೈಗೊಂಡಿರುವ ರಚನಾತ್ಮಕ ಬರಹಕ್ಕಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕಾಂಗ್ರೆಸ್ ಸೇರಲು ಜಾಲಪ್ಪ ನಿರ್ಧಾರ ನವದೆಹಲಿ, ಜ. 16– ಕೇಂದ್ರ ಜವಳಿ ಖಾತೆಯ ಸಚಿವ ಆರ್.ಎಲ್. ಜಾಲಪ್ಪ ಅವರು ಜನತಾದಳಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಕಾಂಗ್ರೆಸ್ ಸೇರಲು ಬಯಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರ ಜತೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ ನಂತರ ಅವರು ಈ ನಿರ್ಧಾರವನ್ನು ಪ್ರಕಟಿಸಿದರು.