ವಿರೋಧ ಪಕ್ಷಗಳ ಸದಸ್ಯರ ಬೇಡಿಕೆಗೆ ಮಣಿದ ಸರ್ಕಾರ, ಕ್ಷಿಪಣಿ ಪರೀಕ್ಷೆ ಮುಂದೂಡಿಕೆ ಬಗ್ಗೆ ನಾಳೆ ಹೇಳಿಕೆ ನೀಡುವುದಾಗಿ ಪ್ರಕಟಿಸಿದ ನಂತರ ಸದನದಲ್ಲಿ ಶಾಂತ ಸ್ಥಿತಿ ಮರಳಿತು. ಶೂನ್ಯ ಕಾಲದಲ್ಲಿ ವಿಷಯ ಪ್ರಸ್ತಾಪಿಸಿದ ಜನತಾ ದಳದ ಎಸ್. ಜೈಪಾಲ್ ರೆಡ್ಡಿ ಅವರು, ಪ್ರಧಾನಿ ನರಸಿಂಹರಾವ್ ಅವರ ವಾಷಿಂಗ್ಟನ್ ಭೇಟಿ ಹಿನ್ನೆಲೆಯಲ್ಲಿ ಅಮೆರಿಕದ ಒತ್ತಡಕ್ಕೆ ತಲೆಬಾಗಿ ಸರ್ಕಾರ ಪೃಥ್ವಿ ಕ್ಷಿಪಣಿ ಪರೀಕ್ಷೆ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು. ಈ ಆರೋಪಕ್ಕೆ ಕೂಡಲೆ ಉತ್ತರಿಸುವಂತೆ ಪ್ರತಿಪಕ್ಷಗಳ ಸದಸ್ಯರು ಪಟ್ಟು ಹಿಡಿದರು.