ಕದ್ರಿ ಗೋಪಾಲನಾಥ್, ಕಸ್ತೂರಿ ಶಂಕರ್ ಸೇರಿ 24 ಮಂದಿಗೆ ಸಂಗೀತ, ನೃತ್ಯ ಅಕಾಡೆಮಿ ಪ್ರಶಸ್ತಿ
ಬೆಂಗಳೂರು, ಡಿ. 1– ಪ್ರೊ. ಎಸ್.ಕೆ. ರಾಮಚಂದ್ರ ರಾವ್, ಮಾಧವ ಗುಡಿ, ಕದ್ರಿ ಗೋಪಾಲನಾಥ್, ಕಸ್ತೂರಿ ಶಂಕರ್ ಸೇರಿದಂತೆ 24 ಜನರನ್ನು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ 95–96ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಕಾಡೆಮಿ ಅಧ್ಯಕ್ಷೆ ಚಂದ್ರಭಾಗಾ ದೇವಿ ಅವರ ಅಧ್ಯಕ್ಷತೆಯಲ್ಲಿ ಇಂದು ಇಲ್ಲಿ ಸೇರಿದ್ದ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ, ಪ್ರಶಸ್ತಿಗೆ ಈ ಗಣ್ಯರನ್ನು ಸರ್ವಾನುಮತದಿಂದ ಆರಿಸಲಾಯಿತು.
ಕಾಂಗೈ ಸಂಸತ್ ಸದಸ್ಯನ ಕಗ್ಗೊಲೆ
ವಿಜಯವಾಡ, ಡಿ. 1 (ಪಿಟಿಐ)– ಆಂಧ್ರ ಪ್ರದೇಶದ ಓಂಗೋಲ್ನಲ್ಲಿ ಜನತಾ ಸಮರ ತಂಡದ (ಪಿಡಬ್ಲ್ಯುಜಿ) ನಕ್ಸಲೀಯರು ಇಂದು ಹಾಡಹಗಲೇ ಕಾಂಗೈ ಸಂಸತ್ ಸದಸ್ಯ ಮಾಗುಂಟ ಸುಬ್ಬರಾಮಿ ರೆಡ್ಡಿ (48) ಮತ್ತು ಅವರ ಅಂಗರಕ್ಷಕನನ್ನು ಗುಂಡಿಕ್ಕಿ ಕೊಂದರು.
ರೆಡ್ಡಿಯವರ ನಿವಾಸಕ್ಕೆ ಬಂದ ಆರು ದುಷ್ಕರ್ಮಿಗಳ ಪೈಕಿ ಇಬ್ಬರು, ತಾವು ಪತ್ರಕರ್ತರು ಎಂದು ರೆಡ್ಡಿ ಅವರಿಗೆ ಪರಿಚಯಿಸಿಕೊಳ್ಳುವ ನಾಟಕವಾಡಿದರು. ಹಸ್ತಲಾಘವಕ್ಕೆ ರೆಡ್ಡಿ ಏಳುವ ಮೊದಲೇ ಉಳಿದವರು ಗುಂಡಿನ ಮಳೆಗರೆದರು.