ನವದೆಹಲಿ, ಜ. 17 (ಪಿಟಿಐ)– 65 ಕೋಟಿ ರೂ. ಹವಾಲ ಹಗರಣದಲ್ಲಿ ಸಿಬಿಐ ಹೆಸರಿಸಿರುವ ಮೂವರು ಕೇಂದ್ರ ಸಚಿವರಾದ ಜಲಸಂಪನ್ಮೂಲ ಅಭಿವೃದ್ಧಿ ಸಚಿವ ವಿ.ಸಿ. ಶುಕ್ಲಾ, ಕೃಷಿ ಸಚಿವ ಬಲರಾಂ ಜಾಖಡ್ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಮಾಧವರಾವ್ ಸಿಂಧಿಯಾ ಅವರು ಇಂದು ರಾತ್ರಿ ರಾಜೀನಾಮೆ ನೀಡಿದರು.
ಹವಾಲ ಹಗರಣದಲ್ಲಿ ಯಾವುದೇ ರೀತಿಯ ಪಾತ್ರ ಇಲ್ಲವಾದರೂ ಸುಪ್ರೀಂ ಕೋರ್ಟಿನ ಸೂಚನೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ಮೂವರು ಸಚಿವರೂ ಸಿಬಿಐ ಕ್ರಮವನ್ನು ಪ್ರಶ್ನಿಸಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ರಾಜಕೀಯ ವಲಯವನ್ನು ತಲ್ಲಣಗೊಳಿಸಿರುವ ಹವಾಲ ಹಗರಣದ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ ಸದ್ಯದಲ್ಲಿಯೇ ಮತ್ತೆ ಸುಮಾರು 25 ಪ್ರಮುಖ ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳ ವಿರುದ್ಧ ವಿ.ಬಿ. ಗುಪ್ತಾ ನೇತೃತ್ವದ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದೆ.
ಹವಾಲ ಎಂದರೇನು?
ನವದೆಹಲಿ, ಜ. 17– ಹವಾಲ ವ್ಯವಹಾರವು ಅಧಿಕೃತ ವಿದೇಶಿ ವಿನಿಮಯ ವ್ಯವಹಾರದ ಹೊರಗೆ ನಡೆಯುವ ಒಂದು ಅಕ್ರಮ ದಂಧೆ.
ಈ ದಂಧೆ ನಡೆಸುವ ಏಜೆಂಟರು ವಿದೇಶಗಳಿಗೆ ಹೋಗುವವರು. ಇಲ್ಲವೇ ರೂಪಾಯಿಯನ್ನು ಡಾಲರ್ ರೂಪದಲ್ಲಿ ಪಡೆಯಲು ಬಯಸುವವರಿಗೆ ಅಕ್ರಮ ವ್ಯವಹಾರದ ಮೂಲಕ ರೂಪಾಯಿಯನ್ನು ಪಡೆದು ಡಾಲರ್ಗೆ ಪರಿವರ್ತಿಸಿಕೊಡುವವರು.