ನವದೆಹಲಿ, ಫೆ. 1 (ಪಿಟಿಐ)– ಪಡಿತರ ಅಕ್ಕಿ, ಸಕ್ಕರೆ, ಗೋಧಿ ಮತ್ತು ಯೂರಿಯ ಹಾಗೂ ಅಡುಗೆ ಅನಿಲದ ಬೆಲೆ ಏರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮಿತ್ರಪಕ್ಷಗಳಾದ ಅಣ್ಣಾಡಿಎಂಕೆ ಹಾಗೂ ತೃಣಮೂಲ ಕಾಂಗ್ರೆಸ್ ಕಟುವಾಗಿ ಟೀಕಿಸಿದ್ದರೆ, ಇನ್ನೊಂದು ಮಿತ್ರಪಕ್ಷ ತೆಲುಗುದೇಶಂ, ಸರ್ಕಾರದ ತಪ್ಪು ನೀತಿಯಿಂದಾಗಿ ಕಾಂಗ್ರೆಸ್ಗೆ ಬಲ ಹೆಚ್ಚುತ್ತಿದೆ ಎಂದು ಆರೋಪಿಸಿದೆ. ತಾನು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮರುಪರಿಶೀಲಿಸುವುದಾಗಿ ಇಂದು ಪ್ರಕಟಿಸಿದೆ.
ವಾಜಪೇಯಿ ನೇತೃತ್ವದ ಸರ್ಕಾರದ ಉಳಿವಿಗೆ ಅಗತ್ಯವಾದ ಬಹುಮತವನ್ನು ಒದಗಿಸಿರುವ ತೆಲುಗುದೇಶಂ ಬೆಂಬಲ ವಾಪಸು ಪಡೆಯುವ ಸಾಧ್ಯತೆಯಿದೆ ಎನ್ನಲಾ ಗಿದ್ದು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದಾವೋಸ್ನಿಂದ ನಾಳೆ ವಾಪಸಾದ ನಂತರ ಈ ನಿರ್ಧಾರ ಆಗುವುದು ಎನ್ನಲಾಗಿದೆ.