ಜಮೀನು ಹೊಂದಿರಲು ವಾಸ ಮತ್ತು ಆದಾಯ ಮಿತಿ ನಿರ್ಬಂಧ ಇಲ್ಲ: ಕಾಂಗ್ರೆಸ್ ತೀರ್ಮಾನ ಬೆಂಗಳೂರು, ಜ. 17– ಸ್ವಂತ ವ್ಯವಸಾಯ ಮಾಡುವವರು ಜಮೀನಿನ 16 ಕಿಲೊ ಮೀಟರ್ ಒಳಗೆ ವಾಸಿಸಬೇಕೆಂಬ ನಿರ್ಬಂಧವನ್ನು ಕೈಬಿಡಲು ಇಂದು ನಡೆದ ವಿಧಾನಮಂಡಲದ ಕಾಂಗ್ರೆಸ್ ಪಕ್ಷದ ಸಭೆ ಸರ್ವಾನುಮತದಿಂದ ತೀರ್ಮಾನಿಸಿತೆಂದು ತಿಳಿದುಬಂದಿದೆ.
ವಾರ್ಷಿಕ ಆದಾಯ 12,000 ರೂಪಾಯಿಗಿಂತ ಹೆಚ್ಚು ಇರುವ ಜನರು ಜಮೀನು ಪಡೆಯಲು ಇದ್ದ ನಿರ್ಬಂಧವನ್ನು ಮಾರ್ಪಡಿಸಿ, ಈ ನಿರ್ಬಂಧ ಮುಂದೆ ಜಮೀನು ಪಡೆಯುವ ಸಂದರ್ಭಗಳಿಗೆ ಅನ್ವಯಿಸಬೇಕೆಂದು ತೀರ್ಮಾನಿಸಿತೆಂದು ಗೊತ್ತಾಗಿದೆ.
ಆಂಧ್ರ ಸಂಪುಟ ರಾಜೀನಾಮೆ ಹೈದರಾಬಾದ್, ಜ. 17– ಆಂಧ್ರ ಮುಖ್ಯಮಂತ್ರಿ ಪಿ.ವಿ. ನರಸಿಂಹ ರಾವ್ ಅವರು ಇಂದು ಸಂಜೆ ರಾಜ್ಯಪಾಲರಿಗೆ ತಮ್ಮ ಸಂಪುಟದ ರಾಜೀನಾಮೆ ಸಲ್ಲಿಸಿದರು.
ಆದರೆ ಬದಲಿ ವ್ಯವಸ್ಥೆ ಮಾಡುವವರೆಗೂ ಅಧಿಕಾರದಲ್ಲಿರುವಂತೆ ರಾಜ್ಯಪಾಲರು ರಾವ್ ಅವರನ್ನು ಪ್ರಾರ್ಥಿಸಿದರು.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವನ್ನು ಇದಕ್ಕೆ ಮುಂಚೆ ರಾವ್ ಅವರು ಸಂಪುಟದ ಸಭೆಯಲ್ಲಿ ಪ್ರಕಟಿಸಿದರು.
ನವದೆಹಲಿ ವರದಿ: ಆಂಧ್ರಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಗುರುವಾರ ಅಧಿಕೃತ ವಾಗಿ ಘೋಷಿಸುವ ನಿರೀಕ್ಷೆ ಇದೆ.