ತಿರುವನಂತಪುರ, ಜುಲೈ 3– ಅಂತರರಾಜ್ಯ ಜಲವಿವಾದ ಶಾಸನದ ಪ್ರಕಾರ, ಕೇರಳ, ಮೈಸೂರು ಮತ್ತು ತಮಿಳುನಾಡುಗಳ ಮಧ್ಯೆ ಇರುವ ಕಾವೇರಿ ಜಲ ವಿವಾದವನ್ನು ನ್ಯಾಯ ಮಂಡಲಿ ಇತ್ಯರ್ಥಕ್ಕೆ ಒಪ್ಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೇರಳ ಆಗ್ರಹಪಡಿಸಲಿದೆಯೆಂದು ಕೇರಳದ ಕಾಮಗಾರಿ ಸಚಿವ ವಿ.ಕೆ. ದಿವಾಕರನ್ ಇಂದು ತಿಳಿಸಿದರು.
ಕೇಂದ್ರ ನೀರಾವರಿ ಹಾಗೂ ವಿದ್ಯುತ್ ಸಚಿವ ಡಾ. ಕೆ.ಎಲ್. ರಾವ್ ನೇತೃತ್ವದಲ್ಲಿ ನಡೆದ ಸಂಧಾನ ಯಶಸ್ವಿಯಾಗದೆ ಹೋಗಿರುವುದರಿಂದ, ನ್ಯಾಯ ಮಂಡಳಿಗೆ ವಿವಾದ ಸಲ್ಲಿಸುವುದೊಂದೇ ಈಗಿರುವ ಮಾರ್ಗವೆಂದು ಅವರು ನುಡಿದರು.