ಹುಬ್ಬಳ್ಳಿ, ಮೇ 28– ಸುಮಿತ್ರಾ ದೇಸಾಯಿ ಪ್ರಕರಣದ ಸಂಬಂಧದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶ್ರೀ ಆರ್.ಡಿ. ಕಿತ್ತೂರ್ ಅವರು ‘ಸನ್ನಿವೇಶಕ್ಕೆ ಬಲಿಯಾದವರು’ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶ್ರೀ ಕೆ.ಎಚ್. ರಂಗನಾಥ್ ಅವರು ಇಂದು ಇಲ್ಲಿ ತಿಳಿಸಿದರು.
ನಾಪತ್ತೆಯಾಗಿರುವ ಸುಮಿತ್ರಾ ದೇಸಾಯಿ ಬಗ್ಗೆ ಗೋವಾದಿಂದ ಪ್ರಕಟವಾಗುತ್ತಿರುವ ಮರಾಠಿ ಪತ್ರಿಕೆಯೊಂದು ಪೂರ್ಣ ಚಿತ್ರ ನೀಡಿದೆಯೆಂದು ಶ್ರೀ ರಂಗನಾಥ್ ಅವರು, ನಿನ್ನೆ ಬೆಳಗಾವಿಯಲ್ಲಿ ಸದರಿ ಪತ್ರಿಕಾ ವರದಿಯ ವಿವರಗಳನ್ನು ತಾವು ಅರಿತಿದ್ದಾಗಿ ಹೇಳಿದರು.
ಕಿತ್ತೂರರ ರಾಜೀನಾಮೆ ಕಾರಣ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟಿನ ಶಾಸಕರಲ್ಲಿ ಅಸಮಾಧಾನ ಮೂಡಿದೆಯೆಂಬ ವರದಿಗಳನ್ನು ಅವರು ತಿರಸ್ಕರಿಸಿದರು.
ಇನ್ನೂ ಸುಳಿವು ಸಿಕ್ಕದ ಸುಮಿತ್ರಾ
ಬೆಂಗಳೂರು, ಮೇ 28– ಕಣ್ಮರೆ ಆಗಿ ಹತ್ತು ದಿನಗಳಾದರೂ ಕುಮಾರಿ ಸುಮಿತ್ರಾ ದೇಸಾಯಿ ಅವರ ಸುಳಿವು ಇನ್ನೂ ಸಿಕ್ಕಿಲ್ಲ.
ರಾಜ್ಯದ ಗೃಹ ಶಾಖೆಯ ರಾಜ್ಯ ಸಚಿವ ಶ್ರೀ ಆರ್.ಡಿ. ಕಿತ್ತೂರು ಅವರ ರಾಜೀನಾಮೆಗೆ ಕಾರಣರಾದ ಕುಮಾರಿ ದೇಸಾಯಿ ಅವರನ್ನು ಪತ್ತೆ ಮಾಡಲು ಪೊಲೀಸರು ಅವಿರತ ಪ್ರಯತ್ನವನ್ನು ಮುಂದುವರಿಸಿದ್ದಾರೆ.
ದೆಹಲಿ, ಅಹಮದಾಬಾದ್, ಪಣಜಿ ನಗರಗಳಿಂದ ಕುಮಾರಿ ದೇಸಾಯಿ ಅವರ ಬಗ್ಗೆ ಈಗಾಗಲೇ ತಿಳಿದು ಬಂದಿರುವ ಸಂಗತಿಗಳನ್ನು ಬಿಟ್ಟರೆ ಹೆಚ್ಚಿನ ಮಾಹಿತಿ ಏನೂ ಸಿಕ್ಕಿಲ್ಲ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.