ಧರಣಿ–ಪ್ರತಿಧರಣಿಗಳಿಂದ ವಿಧಾನಸಭೆಯ ಕಲಾಪ ಭಂಗ ಬೆಂಗಳೂರು, ಡಿ. 23: ಸಂಸತ್ನಲ್ಲಿ ಮಹಾಜನ್ ವರದಿಯ ಮಂಡನೆಯಿಂದ ಉಂಟಾದ ಪರಿಸ್ಥಿತಿಯ ಪರಿಶೀಲನೆಗೆ ಸಮಾವೇಶಗೊಂಡ ಮೈಸೂರು ವಿಧಾನಸಭೆಯ ತುರ್ತು ಅಧಿವೇಶನವು, ಧರಣಿ–ಪ್ರತಿಧರಣಿಗಳ ರಂಗವಾಗಿ, ಕಲಾಪಗಳನ್ನು ನಡೆಸದೆ ಗೊಂದಲದಲ್ಲಿಯೇ ನಾಳೆಗೆಂದು ಎದ್ದಿತು.
‘ಕೇಂದ್ರ ಸರ್ಕಾರ ಮಾಡಿದ್ದು ಸರಿ; ತುರ್ತು ಅಧಿವೇಶನ ಅನಗತ್ಯ’ ಎಂದು ವಾದಿಸಿದ ನಾಲ್ಕು ಮಂದಿಯ ಮಹಾರಾಷ್ಟ್ರ ಏಕೀಕರಣ ಸದಸ್ಯರ ಧರಣಿಯು, ಅವರ ವಿರುದ್ಧ ಸಭೆಯ ಹಲವು ಕಡೆಗಳಿಂದ ಆಕ್ರೋಶದ ಕೂಗುಗಳನ್ನು ತಂದಿತು.
ರೈಲಿನ ಬೋಗಿಗಳಿಗೆ ಬೆಂಕಿ ಸ್ಲೀಪರ್ ಕೋಚ್ ಭಸ್ಮ ಹುಬ್ಬಳ್ಳಿ, ಡಿ. 23: ಮಹಾಜನ್ ವರದಿಯನ್ನು ಸಂಸತ್ನಲ್ಲಿ ಮಂಡಿಸಿದ ಕೇಂದ್ರದ ಕ್ರಮದ ವಿರುದ್ಧ ಪ್ರತಿಭಟಿಸಲು ಇಂದು ಹಾವೇರಿ ರೈಲು ನಿಲ್ದಾಣದಲ್ಲಿ 5 ಸಾವಿರ ಉದ್ರಿಕ್ತ ಪ್ರದರ್ಶನಕಾರರು ಪುಣೆ– ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದರು. ಈ ಪೈಕಿ ಒಂದು ಸ್ಲೀಪರ್ ಕೋಚ್ ಭಸ್ಮವಾಯಿತು.