ನವದೆಹಲಿ, ಫೆ. 3– ಲಾಹೋರಿನಲ್ಲಿ ಭಾರತೀಯ ವಿಮಾನವನ್ನು ಸುಟ್ಟ ಪ್ರಕರಣದಲ್ಲಿ ‘ಪಾಕಿಸ್ತಾನ ಸರ್ಕಾರ ಪ್ರತ್ಯಕ್ಷವಾಗಿ ಭಾಗವಹಿಸಿದೆ’ ಎಂದು ಭಾರತ ಇಂದು ರಾತ್ರಿ ಆಪಾದಿಸಿತು.
ವಿಮಾನ ಅಪಹರಿಸಿ ಅದನ್ನೂ ಅದರಲ್ಲಿದ್ದ ಪ್ರಯಾಣಿಕರ ವಸ್ತುಗಳನ್ನೂ ಸುಟ್ಟಿದ್ದಕ್ಕಾಗಿ ಪರಿಹಾರ ಕೊಡುವಂತೆ ಭಾರತ ಈ ಉಗ್ರ ಒಕ್ಕಣೆಯ ಪತ್ರದಲ್ಲಿ ಆಗ್ರಹ ಮಾಡಿದೆ. ಈ ಆಪಾದನೆಯನ್ನು ಸಮರ್ಥಿಸಲು ಭಾರತ ರುಜುವಾತನ್ನು ಒದಗಿಸುತ್ತದೆ ಎಂದೂ ತನ್ನ ಪ್ರತಿಭಟನಾ ಪತ್ರದಲ್ಲಿ ಅದು ತಿಳಿಸಿದೆ.
ರಾಜ್ಯದಲ್ಲಿ ಚುನಾವಣಾ ಹೊಂದಾಣಿಕೆ ಯತ್ನ ವಿಫಲ
ಬೆಂಗಳೂರು, ಫೆ. 3– ಚುನಾವಣಾ ಹೊಂದಾಣಿಕೆ ಬಗ್ಗೆ ಪಿ.ಎಸ್.ಪಿ. ಮತ್ತು ಇತರ ಪಕ್ಷಗಳ ನಡುವಣ ರಾಜ್ಯ ಮಟ್ಟದ ಸಂಧಾನ ಪ್ರಯತ್ನ ಮುರಿದು ಬಿದ್ದಿದೆ ಎಂದು ಸ್ವತಂತ್ರ ಪಕ್ಷದ ಪ್ರಕಟಣೆಯೊಂದು ತಿಳಿಸಿದೆ.
ಪಕ್ಷದ ಕೇಂದ್ರ ಸಂಸದೀಯ ಮಂಡಳಿಯ ಆದೇಶದಂತೆ, ಸ್ವತಂತ್ರ ಪಕ್ಷವು ಹಾಸನ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ನಿಲ್ಲಿಸಲು ತೀರ್ಮಾನಿಸಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿದ್ದರು.