ನಗರಕ್ಕೆ ಕಾವೇರಿ ನೀರು ಸರಬರಾಜು ಯೋಜನೆ ಕಾರ್ಯಗಳ ಪೂರೈಕೆ ಬೆಂಗಳೂರು, ಫೆ. 17– 1973ರ ಅಂತ್ಯದ ವೇಳೆಗೆ ಕಾವೇರಿಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಯೋಜನೆಯ ಎಲ್ಲ ಕಾರ್ಯಗಳನ್ನೂ ಮುಗಿಸಲಾಗುವುದೆಂದು ಜಲಮಂಡಳಿಯ ಅಧ್ಯಕ್ಷ ಶ್ರೀ ಐ.ಎಂ. ಮುಗ್ಧಂ ಅವರು ಇಂದು ಇಲ್ಲಿ ಪತ್ರಿಕಾ ಪ್ರತಿನಿಧಿಗಳಿಗೆ ತಿಳಿಸಿದರು.
ಚಿಲ್ಲರೆಯ ಚಿಂತೆ ಮುಂಬೈ, ಫೆ. 17– ಈಗ ದೇಶದಲ್ಲಿ ಚಿಲ್ಲರೆ ಹಣಕ್ಕೆ ಬರಗಾಲ. ಮುಂಬಯಿಯಲ್ಲಂತೂ ಎಲ್ಲರ ಗಂಟಲಲ್ಲೂ ಒಂದೇ ಸ್ವರ ‘ಚಿಲ್ಲರೆ ಇಲ್ಲ ಸ್ವಾಮಿ’. ಟ್ಯಾಕ್ಸಿ, ಬಸ್ಸು, ಹೋಟೆಲು, ಮಾರುಕಟ್ಟೆ, ಅಂಗಡಿಗಳು, ಕೊನೆಗೆ ಕ್ಷೌರಿಕನ ಬಳಿ ಕೂಡ ಚಿಲ್ಲರೆ ಇಲ್ಲ. ಮತ್ತೆ ಶ್ರೀಸಾಮಾನ್ಯನಲ್ಲಿ ಹೇಗೆ ಬಂದೀತು?
‘ನಿಗದಿಯಾದ ಹಣ ಕೊಡಿ’, ‘ಚಿಲ್ಲರೆ ಕೇಳಬೇಡಿ’ ಎಂಬಂಥ ಬೋರ್ಡ್ಗಳು ಎಲ್ಲೆಲ್ಲೂ ಕಾಣಿಸಿಕೊಂಡಿವೆ. ಟ್ಯಾಕ್ಸಿ ಹಿಡಿಯಬೇಕಾದರೆ, ಚಿಲ್ಲರೆ ಇದೆ ಎಂಬುದನ್ನು ಸ್ಪಷ್ಟಪಡಿಸಿಕೊಂಡೇ ಟ್ಯಾಕ್ಸಿವಾಲಾ ಒಳಬಿಡುತ್ತಾನೆ. ಟ್ಯಾಕ್ಸಿ ಮೀಟರು 80 ಪೈಸೆ ತೋರಿಸಿದರೆ, ಅವಸರದ ಮುಂಬಯಿವಾಲಾ ಉದಾರತನ ದಿಂದ ‘ಹೋಗಲಿ ಬಿಡಿ’ ಎಂದು ರೂಪಾಯಿ ಕೊಟ್ಟು ಹೊರ ಓಡುತ್ತಾನೆ.
‘ನಮ್ಮ ಅರ್ಥಸಚಿವರು ಏನು ಚಿಲ್ಲರೆ ಜನ ಅಲ್ಲ ಗೊತ್ತಾಯಿತೇ? ಹಾಗೆಂದು ನಿಮಗೆ ತಿಳಿಯಲು ಈ ಏರ್ಪಾಡು’ಎನ್ನುತ್ತಾ ವ್ಯಂಗ್ಯವಾಡುತ್ತಾರೆ ಸಾರ್ವಜನಿಕರು.