ಪಣಜಿ, ಏ. 11– ಕಳೆದ ವರ್ಷ ‘ಹಿಪ್ಪಿ’ಗಳ ನಗ್ನತೆಯ ವಿರುದ್ಧ ಬಂಡಾಯವೆದ್ದಿದ್ದ ಗೋವೆಯ ಮಹಿಳೆಯರು ಈಗ ತಮ್ಮ ಹೋರಾಟವನ್ನು ಕೈಬಿಟ್ಟಿದ್ದಾರೆ. ಹಿಪ್ಪಿಗಳನ್ನು ಸರಿದಾರಿಗೆ ತರಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಈ ಮಹಿಳೆಯರು ಬಂದಿದ್ದಾರೆ.
ಗೋವೆಯು ಹಿಪ್ಪಿಗಳಿಗೆ ಇನ್ನೂ ಆಕರ್ಷಣೀಯ ಕ್ಷೇತ್ರವೇ ಆಗಿದೆ. ಆದರೆ, ಇಲ್ಲಿಗೆ ಹಿಪ್ಪಿಗಳ ವಲಸೆ ಕಳೆದ ವರ್ಷಕ್ಕಿಂತ ಈ ವರ್ಷ ಇಳಿಮುಖವಾಗಿದೆ. ಎರಡು ವರ್ಷಗಳ ಹಿಂದೆ ಇಲ್ಲಿಗೆ ಹಿಪ್ಪಿಗಳು ವಲಸೆ ಬರಲಾರಂಭಿಸಿದಾಗ ಅವರ ಬಗ್ಗೆ ಸ್ಥಳೀಯ ಜನರಿಗೆ ಇದ್ದ ಕುತೂಹಲ ಈಗ ಕಡಿಮೆಯಾಗುತ್ತಿದೆ.
ಕರಗ ಉತ್ಸವ ಹಠಾತ್ ವಾಪಸ್ ಮತ್ತೊಬ್ಬರು ಹೊತ್ತು ಮತ್ತೆ ಸಂಚಾರ
ಬೆಂಗಳೂರು, ಏ. 11– ರಾತ್ರಿ 1.45ರಲ್ಲಿ ಸಂಚಾರ ಪ್ರಾರಂಭಿಸಿದ ನಗರದ ಸುಪ್ರಸಿದ್ಧ ಕರಗವು ಸುಮಾರು 20 ನಿಮಿಷಗಳಲ್ಲೇಶ್ರೀ ಧರ್ಮರಾಯಸ್ವಾಮಿ ಗುಡಿಗೆ ಹಿಂದಿರುಗಿದ ಅಪೂರ್ವ ಘಟನೆ ನಡೆಯಿತು.
ಕಳೆದ ಎರಡು ವರ್ಷಗಳಿಂದ ಕರಗ ಹೊರುತ್ತಿರುವ ಶ್ರೀ ಬಾಲಪ್ಪನವರು ಈ ಸಾರಿಯೂ ಕರಗ ಹೊತ್ತಿದ್ದರು. ಉದ್ದೇಶಿಸಿದ್ದ ಪೂರ್ಣ ಸಂಚಾರದ ಮೊದಲೇ ಹಿಂದಿರುಗಲು ಅವರು ಸ್ವಲ್ಪ ಅಸ್ವಸ್ಥರಾದುದೇ ಕಾರಣ. ಬಳಿಕ ಘಂಟೆ ಪೂಜಾರಿ ಶ್ರೀ ವೆಂಕಟಸ್ವಾಮಿ ಅವರು ಆ ಕರಗವನ್ನು ಹೊತ್ತು ಸಂಚಾರ ಮುಂದುವರಿಸಿದರು.