ನವದೆಹಲಿ, ಜೂನ್ 1– ಕೇವಲ ಮಿಲಿಟರಿ ಬಲದ ಧಾರ್ಷ್ಟ್ಯದಿಂದ ಸಣ್ಣ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಓಬಿರಾಯನ ಕಾಲದ ಮನೋಭಾವ ತ್ಯಜಿಸುವಂತೆ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ಇಂದು ಇಲ್ಲಿ ಬೃಹತ್ ಶಕ್ತಿ ರಾಷ್ಟ್ರಗಳಿಗೆ ಖಂಡತುಂಡವಾಗಿ ತಿಳಿಸಿದರು.
ಎ.ಐ.ಸಿ.ಸಿ. ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು ಪ್ರಜೆಗಳು ಒಂದುಗೂಡಿದಲ್ಲಿ ಸಣ್ಣ ರಾಷ್ಟ್ರಗಳೂ ಶಕ್ತಿ ರಾಷ್ಟ್ರಗಳನ್ನು ಎದುರಿಸಬಹುದೆಂಬುದನ್ನು ವಿಯಟ್ನಾಂ ಋಜುವಾತುಪಡಿಸಿದೆಯೆಂದು ಹೇಳಿದರು.
ಕಾವೇರಿ ನೀರಿನ ಹಂಚಿಕೆ: ರಾಜ್ಯದ ನಿಲುವು
ಬೆಂಗಳೂರು, ಜೂ.1– ಕಾವೇರಿ ನೀರು ನ್ಯಾಯವಾದ ಆಧಾರದ ಮೇಲೆ ಸಂಬಂಧಪಟ್ಟ ರಾಜ್ಯಗಳ ನಡುವೆ ಹಂಚಿಕೆ ಯಾಗ ಬೇಕಾದ ದೃಷ್ಟಿಯಿಂದ ಇಡೀ ಪ್ರಶ್ನೆಯ ಪುನರ್ ಪರಿಶೀಲನೆಯಾಗಬೇಕೆಂಬ ನಿಲುವನ್ನು ರಾಜ್ಯ ಸರ್ಕಾರ ಇತ್ತೀಚಿಗೆ ದೆಹಲಿ ಯಲ್ಲಿ ನಡೆದ ಮಾತುಕತೆಯ ಕಾಲದಲ್ಲಿ ತಾಳಿತೆಂದು ತಿಳಿದುಬಂದಿದೆ.
ಮೈಸೂರು, ತಮಿಳುನಾಡು ಮತ್ತು ಕೇರಳ ರಾಜ್ಯಗಳ ನಡುವೆ ನಡೆದ ಮಾತುಕತೆಯಲ್ಲಿ ರಾಜ್ಯದ ಪರವಾಗಿ ಮುಖ್ಯಮಂತ್ರಿ ಡಿ.ದೇವರಾಜ ಅರಸು, ಭಾರಿ ನೀರಾವರಿ ಖಾತೆಯ ರಾಜ್ಯ ಸಚಿವ ಎಚ್.ಎನ್.ನಂಜೇಗೌಡ ಅವರುಗಳು ಭಾಗವಹಿಸಿದ್ದರು.