ಬಾಹ್ಯಾಂತರಿಕ್ಷ ವಿಜ್ಞಾನದ ಅಭಿವೃದ್ಧಿಗಾಗಿ ಆಯೋಗ: ಪ್ರೊ.ದಾವನ್ ಅಧ್ಯಕ್ಷರು
ನವದೆಹಲಿ, ಜೂ.2– ದೇಶದಲ್ಲಿ ಅಂತರಿಕ್ಷ ವಿಜ್ಞಾನ ಹಾಗೂ ತಾಂತ್ರಿಕ ಜ್ಞಾನದ ತ್ವರಿತ ಅಭಿವೃದ್ಧಿಗಾಗಿ ಕಾರ್ಯಕ್ರಮ ರೂಪಿಸಲು ಅಂತರಿಕ್ಷ ಆಯೋಗವೊಂದನ್ನು ಈ ಕೂಡಲೇ ನೇಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಬೆಂಗಳೂರಿನಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಡೈರಕ್ಟರ್ ಪ್ರೊ.ಎಸ್.ಧಾವನ್ ಅವರು ಈ ಆಯೋಗದ ಅಧ್ಯಕ್ಷರಾಗಿದ್ದು, ಆಯೋಗದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿರುತ್ತದೆ.
ಶರಾವತಿ ವಿದ್ಯುತ್ ಉತ್ಪಾದನಾ ಯಂತ್ರದ ಚಕ್ರಗಳಿಗೆ ತೀವ್ರ ಜಖಂ
ಬೆಂಗಳೂರು, ಜೂ.2– ತಲಕಳಲೆ ಜಲಾಶಯದಿಂದ ಶರಾವತಿ ವಿದ್ಯುದಾಗಾರಕ್ಕೆ ನೀರು ಒದಗಿಸುವ ಆರು ಫರ್ಲಾಂಗ್ ಉದ್ದದ ಒಂದು ಸುರಂಗ ಮಾರ್ಗದಲ್ಲಿ ಕೊರಕಲು ಬಿದ್ದು, ಕಲ್ಲು ಹಾಗೂ ಕಾಂಕ್ರೀಟ್ ಚೂರುಗಳೆದ್ದು, ಕೆಲ ವಿದ್ಯುತ್ ಉತ್ಪತ್ತಿ ಯಂತ್ರಗಳ ಭಾರಿ ಚಕ್ರಗಳಿಗೆ ತೀವ್ರ ಜಖಂ ಆಗಿರುವುದು ಈಗ ಬೆಳಕಿಗೆ ಬಂದಿದೆ.
ನಿರ್ಮಾಣವಾದ 4 ವರ್ಷಗಳಲ್ಲಿ ಸುರಂಗ ಮಾರ್ಗ ಈ ದುಸ್ಥಿತಿಗೆ ಈಡಾಗಿ ದುರಸ್ತು ಮಾಡಿದ ಮತ್ತೆ ಒಂದು ವರ್ಷದ ನಂತರ ಮತ್ತೆ ಅದೇ ದುಸ್ಥಿತಿಗೆ ಬಂದ ಈ ಪ್ರಕರಣ ಇಲ್ಲಿಯವರೆಗೆ ಸಾರ್ವಜನಿಕರ ಗಮನಕ್ಕೆ ಬಂದಿರಲಿಲ್ಲ. ಪ್ರಕರಣದ ಬಗ್ಗೆ ಕಳವಳಕಾರಕ ವರದಿ ಬಂದ ನಂತರ ಲೋಕೋಪಯೋಗಿ ಸಚಿವ ಎಚ್.ಎಂ.ಚನ್ನಬಸಪ್ಪ ಅವರು ಕಳೆದ 14 ರಂದು ಶರಾವತಿಗೆ ಭೇಟಿ ನೀಡಿ ಸ್ವತಃ ಸುರಂಗ ಮಾರ್ಗವನ್ನು ಪರಿಶೀಲಿಸಿದರು.