ಪೋರ್ಟ್ ಆಫ್ ಸ್ಪೇನ್ (ಟ್ರಿನಿಡಾಡ್), ಏ. 20– ಪ್ರಬಲ ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಭಾರತವು ಸರಣಿಯ ‘ರಬ್ಬರ್’ ಗೆದ್ದುಕೊಂಡಿದೆ.
ಸೋಮವಾರ ಮುಕ್ತಾಯವಾದ ಸರಣಿಯಲ್ಲಿ ಭಾರತ ಟೀಮಿನವರು ನಡೆದ ಐದು ಟೆಸ್ಟ್ಗಳಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು ಉಳಿದ ನಾಲ್ಕು ಟೆಸ್ಟ್ಗಳನ್ನು ಡ್ರಾ ಮಾಡಿಕೊಂಡರು.
ದ್ವಿತೀಯ ಟೆಸ್ಟ್ ನಡೆದ ಪೋರ್ಟ್ ಆಫ್ ಸ್ಪೇನಿನ ಕ್ವೀನ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಐದನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯ ಡ್ರಾ ಆಗಿ ಕೊನೆಗೊಂಡಿತು.
ನದಿ ದಾಟುತ್ತಿದ್ದ ನಿರಾಶ್ರಿತರಿಗೆ ಗುಂಡಿಕ್ಕಿ ಕೊಲೆ
ಕಲ್ಕತ್ತ, ಏ. 20– ಪಾಕಿಸ್ತಾನಿ ಸೈನಿಕರಿಂದ ವಿಧ್ವಂಸಗೊಂಡ ನಂತರ ಬೆಂಕಿಯಲ್ಲಿ ಉರಿಯುತ್ತಿದ್ದ ರಾಜಷಾಹಿ ಜಿಲ್ಲೆಯ ಗ್ರಾಮವೊಂದರಲ್ಲಿ ಶನಿವಾರ ತಾವು ಕಣ್ಣಾರೆ ಕಂಡ ದಾರುಣ ದೃಶ್ಯವನ್ನು ಪಶ್ಚಿಮ ಬಂಗಾಳದ ಉಪಮುಖ್ಯಮಂತ್ರಿ ಬಿಜಯ್ ಸಿಂಗ್ ನಹಾರ್ ಅವರು ಸೋಮವಾರ ಇಲ್ಲಿ ಪತ್ರಕರ್ತರಿಗೆ ಬಣ್ಣಿಸಿದರು.
ನದಿ ದಾಟುತ್ತಿದ್ದ ನಿರಾಶ್ರಿತರನ್ನು ಪಾಕಿಸ್ತಾನದ ಸೈನಿಕರು ಗುಂಡಿಕ್ಕಿ ಕೊಂದ ಸ್ಥಳವನ್ನೂ ತಾವು ಸಂದರ್ಶಿಸಿದ್ದಾಗಿ, ನಿರಾಶ್ರಿತರು ಆಶ್ರಯ ಪಡೆದಿರುವ ಮುರ್ಷಿದಾಬಾದ್ ಜಿಲ್ಲೆಯ ಪ್ರವಾಸದ ನಂತರ ವಾಪಸಾದ ಅವರು ತಿಳಿಸಿದರು.