ಮುಚ್ಚಿದ ಕೈಗಾರಿಕಾ ಘಟಕಗಳ ಸ್ವಾಧೀನಕ್ಕೆ ಸರ್ಕಾರಕ್ಕೆ ಅಧಿಕಾರ
ಚನ್ನಪಟ್ಟಣ, ಆ. 22– ಮುಚ್ಚಲಾದ ಕೈಗಾರಿಕಾ ಘಟಕಗಳನ್ನು ಮಾರುಕಟ್ಟೆ ದರದಲ್ಲಿ ಪರಿಹಾರ ನೀಡದೆ ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರವನ್ನು ಸರ್ಕಾರಕ್ಕೆ ನೀಡಲು, ಬರುವ ಲೋಕಸಭೆ ಅಧಿವೇಶನದಲ್ಲಿ ಸಂವಿಧಾನವನ್ನು ಮತ್ತೆ ತಿದ್ದುಪಡಿ ಮಾಡಲಾಗುವುದು.
ಕೇಂದ್ರ ಉಕ್ಕು ಖಾತೆ ಸಚಿವ ಮೋಹನಕುಮಾರ ಮಂಗಳಂರವರು ಇಲ್ಲಿ ಇಂದು ವಕೀಲರ ಸಂಘದಲ್ಲಿ ಭಾಷಣ ಮಾಡುತ್ತ ಈ ವಿಚಾರ ತಿಳಿಸಿದರು.
ಸಂವಿಧಾನದ 31(ಎ) ವಿಧಿಯನ್ನು ಬದಲಾಯಿಸುವ ಈ ತಿದ್ದುಪಡಿಯು ಇತ್ತೀಚೆಗೆ ಅಂಗೀಕರಿಸಲಾದ ಸಂವಿಧಾನ ತಿದ್ದುಪಡಿ ಮಸೂದೆಗಿಂತ ಹೆಚ್ಚು ವ್ಯಾಪಕ ಪರಿಣಾಮಗಳನ್ನುಂಟು ಮಾಡುವುದೆಂದೂ ಹೇಳಿದರು.