ರಾಜಕೀಯ, ಗುಂಪುಗಾರಿಕೆ– ಸ್ವಾರ್ಥ ಸಾಧಕರಿಂದ ಸಹಕಾರ ಸಂಘಗಳ ವಿಮೋಚನೆಗೆ ಆಗ್ರಹ
ಬೆಂಗಳೂರು, ಮೇ 24– ಸಹಕಾರ ಸಂಘಗಳನ್ನು ರಾಜಕೀಯ ಗುಂಪುಗಾರಿಕೆ ಮತ್ತು ಸ್ವಾರ್ಥಸಾಧನೆ ಮಾಡುವವರ ಹಿಡಿತದಿಂದ ತಪ್ಪಿಸಬೇಕೆಂದು ವಿಧಾನ ಪರಿಷತ್ತಿನಲ್ಲಿ ಇಂದು ಸದಸ್ಯರು ಒತ್ತಾಯ ಪಡಿಸಿದರು.
ಬದಲಾದ ಪರಿಸ್ಥಿತಿಯಲ್ಲಿ ಸಹಕಾರ ಸಂಘಗಳೇ ಬೇಕಾಗಿಲ್ಲ ಎಂದು ಸ್ವತಂತ್ರ ಪಕ್ಷದ ಸದಸ್ಯ ಶ್ರೀ ಚನ್ನ ಬೈರೇಗೌಡ ಅವರು ವಾದಿಸಿದರು.
ಮೈಸೂರು ರಾಜ್ಯ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ಸಿನ ಶ್ರೀ ಎನ್. ರಾಚಯ್ಯ ಅವರು, ಸಹಕಾರ ಸಂಘಗಳಲ್ಲಿ ಶೇ 60ರಷ್ಟು ಡೈರೆಕ್ಟರುಗಳ ಸ್ಥಾನಗಳಿಗೆ ಕೃಷಿ ಕಾರ್ಮಿಕರು, ಹರಿಜನರು ಮುಂತಾದ ನಿಮ್ನ ವರ್ಗಗಳವರನ್ನು ನೇಮಿಸಬೇಕೆಂದು ಒತ್ತಾಯ ಪಡಿಸಿದರು.
ಸಹಕಾರ ಸಂಘಗಳಲ್ಲಿ ಜಾತೀಯತೆ ತಾಂಡವವಾಡುತ್ತಿದೆ ಎಂದು ಟೀಕಿಸಿದ ಅವರು, ಸಂಘಗಳಲ್ಲಿ ಡೈರೆಕ್ಟರ್ ಸ್ಥಾನ ಮಾತ್ರವಲ್ಲ ನಾಲ್ಕನೇ ದರ್ಜೆಯ ಜವಾನರ ಹುದ್ದೆಗೂ ಹರಿಜನರ ನೇಮಕವಾಗುತ್ತಿಲ್ಲ ಎಂದರು.
ಸಹಕಾರ ಇಲಾಖೆಯಲ್ಲಿ ಉನ್ನತ ಹುದ್ದೆಗಳ ನೇಮಕ ಜಾಸ್ತಿಯಾಗುತ್ತಿದೆ ಎಂದು ಸಂಸ್ಥಾ ಕಾಂಗ್ರೆಸಿನ ಶ್ರೀ ವಿ.ಎಸ್. ಕೃಷ್ಣ ಅಯ್ಯರ್ ಅವರು ಟೀಕಿಸಿ, ಸಹಕಾರ ಸಂಘಗಳ ಸುಧಾರಣೆಗಾಗಿ ಸಮಗ್ರ ತಿದ್ದುಪಡಿ ವಿಧೇಯಕವೊಂದನ್ನು ತರಬೇಕೆಂದರು.
ಸಮಗ್ರ ತಿದ್ದುಪಡಿ ವಿಧೇಯಕವೊಂದನ್ನ ಈಗಾಗಲೇ ವಿಧಾನಸಭೆಯಲ್ಲಿ ಮಂಡಿಸಲಾಗಿದೆ ಎಂದು ಸಹಕಾರ ಸಚಿವ ಶ್ರೀ ಎನ್. ಶಂಕರ ಆಳ್ವ ತಿಳಿಸಿದರು.