ಬೆಂಗಳೂರು, ಜೂನ್ 15– ಅಡಿಕೆ ಮಾರುಕಟ್ಟೆಯಲ್ಲಿ ಈಗ ಉಂಟಾಗಿರುವ ವಿಚಿತ್ರ ಪರಿಸ್ಥಿತಿಗೆ ದಳ್ಳಾಳಿಗಳೇ ಕಾರಣ ಎಂದು ರಾಜ್ಯದ ಕೃಷಿ ಸಚಿವ ಶ್ರೀ ಕೆ.ಎಚ್.ಪಾಟೀಲ್ ಅವರು ಇಂದು ಆಪಾದಿಸಿದರು.
ಕೃಷಿ ಕೈಗಾರಿಕಾ ಕಾರ್ಪೋರೇಷನ್ನಿನ ಆಶ್ರಯದಲ್ಲಿ ಸಚಿವ ಶ್ರೀ ಪಾಟೀಲ್ ಅವರು ಕೃಷಿ ಬಿಡಿ ಭಾಗಗಳ ವಿಭಾಗವನ್ನು ಉದ್ಘಾಟಿಸಿ ‘ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಲೆ ಕಮ್ಮಿ ಆಗಿದೆ. ಆದರೆ ಅಡಿಕೆಯ ಬಿಲ್ಲರೆ ಬೆಲೆ ಎಂದಿನಂತೆ ಏರುತ್ತಲೇ ಹೊರಟಿದೆ. ಇದಕ್ಕೆಲ್ಲ ದಳ್ಳಾಳಿಗಳೇ ಕಾರಣ’ ಎಂದರು.
ಬಾಂಗ್ಲಾದೇಶದಿಂದ ಅಡಿಕೆ ಆಮದು ಮಾಡಿಕೊಂಡ ಪರಿಣಾಮವಾಗಿ ಈ ಪರಿಸ್ಥಿತಿ ಉಂಟಾಗಿದೆ ಎಂಬುದನ್ನು ಸಚಿವರು ಅಲ್ಲಗಳೆದರು.
...ವಿಮಾನ ಹೊರಟು ಹೋಯಿತು!
ಬೆಂಗಳೂರು, ಜೂನ್ 15– ಸ್ವಲ್ಪ ವಿಳಂಬ ವಾಗಿ ವಿಮಾನ ನಿಲ್ದಾಣ ತಲುಪಿದ ಕಾರಣ ಮುಖ್ಯಮಂತ್ರಿ ಡಿ. ದೇವರಾಜ ಅರಸು ಹಾಗೂ ಲೋಕೋಪಯೊಗಿ ಸಚಿವಶ್ರೀ ಎಚ್.ಎಂ. ಚನ್ನಬಸಪ್ಪ ಅವರುಗಳು ವೈಯಕ್ತಿಕವಾಗಿ ರಾಷ್ಟ್ರಪತಿಯನ್ನು ಬೀಳ್ಕೊಡಲು ಅಗಲಿಲ್ಲ.
ರಾಷ್ಟ್ರಪತಿ ಶ್ರೀ ಗಿರಿ ಅವರು ಸುಮಾರು 4.25ಕ್ಕೆ ವಿಮಾನ ಹತ್ತಿದರು. ಆ ವೇಳೆಗೆ ಸಚಿವ ಶ್ರೀ ಚನ್ನಬಸಪ್ಪ ಅವರು ಸ್ಥಳ ತಲುಪಿದರು. ಇದಾದ ಸುಮಾರು ಎರಡು ನಿಮಿಷಗಳ ನಂತರ ಮುಖ್ಯಮಂತ್ರಿಗಳು ತಲುಪಿದರು. ಅಷ್ಟು ಹೊತ್ತಿಗೆ ವಿಮಾನದ ಬಾಗಿಲು ಹಾಕಿದ್ದು ಅದು ಚಲಿಸಲು ಸಿದ್ಧ ಮಾಡಿಕೊಳ್ಳುತ್ತಿತ್ತು.