ಬಾಂಗ್ಲಾದೇಶ ಸರ್ಕಾರಕ್ಕೆ ಭಾರತದ ಮಾನ್ಯತೆ ಕೂಡಲೆ ಇಲ್ಲ: ಇಂದಿರಾ
ನವದೆಹಲಿ, ಮೇ 7– ಭಾರತವು ಬಾಂಗ್ಲಾದೇಶ ಸರ್ಕಾರಕ್ಕೆ ಈ ಕೂಡಲೇ ಮಾನ್ಯತೆ ನೀಡುವ ಸಂಭವ ಇಲ್ಲ ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ಸಂಸತ್ನಲ್ಲಿನ ವಿರೋಧ ಪಕ್ಷದ ನಾಯಕರಿಗೆ ತಿಳಿಸಿದರು.
ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡುವ ಬಗ್ಗೆ ಭಾರತವು ಮಿತ್ರರಾಷ್ಟ್ರಗಳೊಂದಿಗೆ ಪ್ರಸ್ತಾಪಿಸುತ್ತಲೇ ಇದೆ. ಆದರೆ, ಬೇರೆ ಯಾವ ರಾಷ್ಟ್ರವೂ ಮಾನ್ಯತೆ ನೀಡಲು ಇಚ್ಛಿಸುತ್ತಿರುವಂತೆ ಕಾಣಬರುತ್ತಿಲ್ಲ ಎಂದರು.
ಬಜೆಟ್ ಮಂಡನೆಗೆ ಅಡ್ಡಿ, ಧರಣಿ
ಬೆಂಗಳೂರು, ಮೇ 7– ಆಯವ್ಯಯ ಮಂಡನೆಗೆ ಕ್ರಿಯಾಲೋಪಗಳ ಮೂಲಕ ಇಂದು ನಗರ ಕಾರ್ಪೊರೇಷನ್ ಸಭೆಯಲ್ಲಿ ಸುಮಾರು ನೂರೈವತ್ತು ನಿಮಿಷಗಳ ಕಾಲ ಅಡ್ಡಿ ತಂದ ವಿರೋಧ ಪಕ್ಷದ ಹಲವು ಸದಸ್ಯರು, ತಮ್ಮ ಯತ್ನ ವಿಫಲವಾದಾಗ ಮೇಯರ್ ಶ್ರೀ ಜೆ.ಲಿಂಗಯ್ಯ ಅವರ ವೇದಿಕೆಯ ಮೇಲೆ ಧರಣಿ ಸತ್ಯಾಗ್ರಹ ಹೂಡಿದರು.
ಮೇಯರ್ ಅವರು ನಿಯಮಗಳನ್ನು ಗಾಳಿಗೆ ತೂರಿದ್ದಾರೆಂದು ಪ್ರತಿಭಟಿಸಿ ಸಭಾತ್ಯಾಗ ಮಾಡಿದರು.