ನವದೆಹಲಿ, ಜೂನ್ 7– ಸರ್ಕಾರವು ‘ಪಶ್ಚಿಮ ಪಾಕಿಸ್ತಾನವನ್ನು ಸಂತೈಸುತ್ತಿದೆ’ ಎಂಬ ಆರೋಪವನ್ನು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ಲೋಕಸಭೆಯಲ್ಲಿ ಅಲ್ಲಗೆಳೆದರು.
ಪೂರ್ವ ಬಂಗಾಳದ ನಿರಾಶ್ರಿತರಲ್ಲಿ ಕಾಲರಾ ಹಬ್ಬಿರುವ ಬಗೆಗೆ ಬಂದಿದ್ದ ಸೆಳೆಯುವ ಸೂಚನೆ ಸಂಬಂಧದಲ್ಲಿ ಪ್ರದಾನಿ ಮಾತನಾಡಿ, ‘ಪ್ರತ್ಯಕ್ಷವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ನಾವು ಅವರಿಗೆ (ಪಶ್ಚಿಮ ಪಾಕಿಸ್ತಾನಿಗಳಿಗೆ) ಪ್ರೋತ್ಸಾಹ ಕೊಡುತ್ತಿಲ್ಲ ಎಂದರು.
‘ಅಲ್ಲಿನ ನಿಜವಾದ ಸ್ಥಿತಿಗತಿ ಕಡೆಗೆ ವಿಶ್ವದ ಗಮನ ಸೆಳೆಯುವುದರಲ್ಲಿ ನಾವು ಬಹಳ ಕಾರ್ಯನಿರತರಾಗಿದ್ದೇವೆ’ ಎಂದರವರು.
ಸಮಗ್ರ ಪ್ರದೇಶ ಅಭಿವೃದ್ಧಿ ಯೋಜನೆ ವ್ಯಾಪ್ತಿಗೆ ತುಂಗಭದ್ರಾ: 1.5 ಕೋಟಿ ರೂಪಾಯಿ ಕೇಂದ್ರ ನೆರವು
ನವದೆಹಲಿ, ಜೂನ್ 7– ಕೇಂದ್ರ ಸರ್ಕಾರ ರೂಪಿಸಿರುವ ಸಮಗ್ರ ಪ್ರಾದೇಶಿಕ ಅಭಿವೃದ್ದಿ ಯೋಜನೆಯೊಂದನ್ನು ರಾಷ್ಟ್ರದಲ್ಲಿ ಆಯ್ಕೆ ಮಾಡಲ್ಪಟ್ಟ ಹತ್ತು ಭಾರಿ ನೀರಾವರಿ ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದೆಂದು ಕೃಷಿ ಸ್ಟೇಟ್ ಸಚಿವ ಷೇರ್ಸಿಂಗ್ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಈ ಬೃಹತ್ ಯೋಜನೆಗೆ ಆಯ್ಕೆ ಮಾಡಲ್ಪಟ್ಟ ಭಾರಿ ನೀರಾವರಿಯ ಹತ್ತು ಕೇಂದ್ರಗಳಲ್ಲಿ ಮೈಸೂರು ರಾಜ್ಯದ ತುಂಗಭದ್ರಾ ಪ್ರದೇಶವೂ ಒಂದಾಗಿದೆ.